ಸಮಾಜವಾದಿ ಪಕ್ಷದ ನಾಯಕ ಹಾಗೂ ಮಾಜಿ ರಕ್ಷಣಾ ಸಚಿವ ಮುಲಾಯಂ ಸಿಂಗ್ ಯಾದವ್
ನವದೆಹಲಿ: ಪಾಕಿಸ್ತಾನದ ಜೊತೆಗೆ ಕೈಜೋಡಿಸಿರುವ ಚೀನಾ ಭಾರತದ ಮೇಲೆ ಯುದ್ಧ ಮಾಡಲು ಸಿದ್ಧವಾಗಿ ನಿಂತಿದೆ ಎಂದು ಸಮಾಜವಾದಿ ಪಕ್ಷದ ನಾಯಕ ಹಾಗೂ ಮಾಜಿ ರಕ್ಷಣಾ ಸಚಿವ ಮುಲಾಯಂ ಸಿಂಗ್ ಯಾದವ್ ಅವರು ಬುಧವಾರ ಹೇಳಿದ್ದಾರೆ.
ಡೋಕ್ಲಾಮ್ ಗಡಿ ವಿವಾದ ಸಂಬಂಧ ಲೋಕಸಭೆಯಲ್ಲಿ ಮಾತನಾಡಿರುವ ಅವರು, ಮಿತ್ರರಾಷ್ಟ್ರ ಪಾಕಿಸ್ತಾನದೊಂದಿಗೆ ಚೀನಾ ಕೈಜೋಡಿಸಿದ್ದು, ಭಾರತದ ಮೇಲೆ ಯುದ್ಧ ಮಾಡಲು ಈಗಾಗಲೇ ಸಿದ್ಧತೆ ನಡೆಸಿದೆ. ಗಡಿ ವಿವಾದ ಸಂಬಂಧ ಭಾರತ ಸರ್ಕಾರ ತನ್ನ ನಿಲುವನ್ನು ಬದಲಾಯಿಸಬೇಕಿದ್ದು, ಗಡಿ ಭಾಗವನ್ನು ಸ್ವತಂತ್ರಗೊಳಿಸುವುದಕ್ಕೆ ಬೆಂಬಲ ವ್ಯಕ್ತಪಡಿಸಿಬೇಕಿದೆ ಎಂದು ಹೇಳಿದ್ದಾರೆ.
ಚೀನಾ ಹಾಗೂ ಭಾರತದ ನಡುವೆ ಉಂಟಾಗಿರುವ ಬಿಕ್ಕಟ್ಟು ಕುರಿತಂತೆ ನೆರೆರಾಷ್ಟ್ರದಿಂದ ಎದುರಾಗುವ ಸವಾಲುಗಳನ್ನು ಎದುರಿಸಲು ನಡೆಸಲಾಗಿರುವ ಸಿದ್ಧತೆ ಹಾಗೂ ಇನ್ನಿತರೆ ವಿಚಾರಗಳ ಕುರಿತು ಸರ್ಕಾರ ಸಂಸತ್ತಿಗೆ ಮಾಹಿತಿ ನೀಡಬೇಕು. ಚೀನಾದಿಂದ ಭಾರತ ದೊಡ್ಡ ಅಪಾಯವನ್ನು ಎದುರಿಸುತ್ತಿದೆ. ಹಲವು ವರ್ಷಗಳಿಂದಲೂ ನಾನು ಕೇಂದ್ರ ಸರ್ಕಾರಕ್ಕೆ ಈ ಬಗ್ಗೆ ಎಚ್ಚರಿಕೆ ನೀಡುತ್ತಲೇ ಬಂದಿದ್ದೇನೆ. ಪಾಕಿಸ್ತಾನದೊಂದಿಗೆ ಕೈ ಜೋಡಿಸಿರುವ ಚೀನಾ ಭಾರತದ ವಿರುದ್ಧ ಷಡ್ಯಂತ್ರ ರೂಪಿಸಿ ದಾಳಿ ನಡೆಸಲು ಸಿದ್ಧವಾಗಿದೆ.
ಚೀನಾ ಭಾರತದ ದೊಡ್ಡ ಶತ್ರು ರಾಷ್ಟ್ರವಾಗಿದೆ. ಸರ್ಕಾರ ಈ ವರೆಗೂ ಏನು ಮಾಡಿದೆ? ಕಾಶ್ಮೀರ ವಿವಾದ ಸಂಬಂಧ ಚೀನಾ ಸೇನೆ ಈಗಾಗಲೇ ಪಾಕಿಸ್ತಾನ ಸೇನೆಯೊಂದಿಗೆ ಕೈಜೋಡಿಸಿದೆ. ಭಾರತದ ಮೇಲೆ ದಾಳಿ ನಡೆಸುವ ಸಲುವಾಗಿ ಈಗಾಗಲೇ ಚೀನಾ ಪಾಕಿಸ್ತಾನದಲ್ಲಿ ತನ್ನ ಪರಮಾಣು ಶಸ್ತ್ರಾಸ್ತ್ರಗಳನ್ನು ಇಟ್ಟಿದೆ. ಈ ಬಗ್ಗೆ ಗುಪ್ತಚರ ಇಲಾಖೆಗೆ ಹೆಚ್ಚಾಗಿ ಮಾಹಿತಿ ಗೊತ್ತಿದೆ.
ಡೋಕ್ಲಾಮ್ ಗಡಿ ಪ್ರದೇಶದ ಚೀನಾದ ಭಾಗವೆಂದು ಪರಿಗಣಿಸಿರುವುದೇ ನಮ್ಮ ತಪ್ಪು. ಆ ಗಡಿ ಭಾಗವನ್ನು ಸ್ವತಂತ್ರಗೊಳಿಸುವುದಕ್ಕೆ ಭಾರತ ಬೆಂಬಲ ವ್ಯಕ್ತಪಡಿಸಬೇಕಿದೆ. ಚೀನಾ ನಮ್ಮ ಶತ್ರು ರಾಷ್ಟ್ರವೇ ಹೊರತು ಪಾಕಿಸ್ತಾನವಲ್ಲ. ಪಾಕಿಸ್ತಾನ ನಮ್ಮಗೆ ಯಾವುದೇ ಹಾನಿಯನ್ನು ಮಾಡುವುದಿಲ್ಲ. ಭೂತಾನ್ ರಕ್ಷಣೆ ಮಾಡುವು ಭಾರತದ ಕರ್ತವ್ಯ. ಚೀನಾ ಇದೀಗ ನೇಪಾಳದ ಮೇಲೆ ಕಣ್ಣಿಡುತ್ತಿದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos