ನವದೆಹಲಿ: ಭಯೋತ್ಪಾದನೆ ಪ್ರಾಯೋಜಿಸುತ್ತಿರುವ ಪಾಕಿಸ್ತಾನದ ವಿರುದ್ಧ ಆಡಳಿತಾರೂಢ ಎನ್ ಡಿಎ ಪಕ್ಷದ ಉಪ ರಾಷ್ಟ್ರಪತಿ ಅಭ್ಯರ್ಥಿ ವೆಂಕಯ್ಯ ನಾಯ್ಡು ಅವರು ಭಾನುವಾರ ತೀವ್ರವಾಗಿ ಕಿಡಿಕಾರಿದ್ದಾರೆ.
ಕಾರ್ಗಿಲ್ ಪರಾಕ್ರಮ ಪರೇಡ್ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ಭಯೋತ್ಪಾದನೆಯನ್ನು ಪ್ರಯೋಜಿಸುತ್ತಿರುವ ಪಾಕಿಸ್ತಾನ 1971ರ ಯುದ್ಧವನ್ನು ನೆನಪಿಸಿಕೊಳ್ಳಬೇಕಿದೆ. ಭಯೋತ್ಪಾದನೆಗೆ ನೀಡುತ್ತಿರುವ ನೆರವು ಹಾಗೂ ಕುಮ್ಮಕ್ಕುಗಳು ಅವರಿಗೆ ಎಂದಿಗೂ ಸಹಾಯ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಭಯೋತ್ಪಾದನೆ ಎಂಬುದು ಮಾನವೀಯತೆಯ ಶತ್ರುವಾಗಿದೆ. ಅದಕ್ಕೆ ಧರ್ಮ ಹಾಗೂ ಜಾತಿಯಿಲ್ಲ. ದುರಾದೃಷ್ಟಕರ ವಿಚಾರವೆಂದರೆ ಇಂತಹ ಭಯೋತ್ಪಾದನೆ ಎಂಬುದು ಪಾಕಿಸ್ತಾನದಲ್ಲಿ ರಾಷ್ಟ್ರನೀತಿಯಾಗಿದೆ ಹೋಗಿದೆ.
ಭಯೋತ್ಪಾದನೆ ನೆರವು ನೀಡುವುದು ಹಾಗೂ ಕುಮ್ಮಕ್ಕು ನೀಡುವುದರಿಂದ ತಮಗೆ ಯಾವ ಸಹಾಯವಾಗುವುದಿಲ್ಲ ಎಂಬುದನ್ನು ನೆರೆರಾಷ್ಟ್ರ ಮನಗಾಣಬೇಕಿದೆ. 1971ರಲ್ಲಿ ಏನಾಯಿತು ಎಂಬುದನ್ನು ಅವರು ನೆನೆಯಬೇಕಿದೆ. ಇದನ್ನು ನೆನೆದು ತಮ್ಮ ದೇಶದ ಕುರಿತು ಗಮನಹರಿಸಿ, ಶಾಂತಿಯನ್ನು ಕಾಪಾಡಬೇಕಿದೆ. ಭಯೋತ್ಪಾದನೆ ಎಂಬುದು ಮಾನವೀಯತೆಯ ಶತ್ರುವಾಗಿದೆ. ಅದಕ್ಕೆ ಯಾವುದ ಧರ್ಮವಿಲ್ಲ. ಆದರೆ, ಪಾಕಿಸ್ತಾನ ಭಯೋತ್ಪಾದನೆಯನ್ನು ಧರ್ಮದೊಂದಿಗೆ ಸೇರಿಸುತ್ತಿದೆ. ಈ ರೀತಿಯ ಬೆಳವಣಿಗೆ ಪಾಕಿಸ್ತಾನ ದೇಶದ ನೀತಿಯಾದಿರುವುದು ದುರಾದೃಷ್ಟಕರ ಎಂದು ತಿಳಿಸಿದ್ದಾರೆ.
ಇದೇ ವೇಳೆ ಕಾಶ್ಮೀರ ವಿವಾದ ಕುರಿತಂತೆ ಮಾತನಾಡಿರುವ ಅವರು, ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಕಾಶ್ಮೀರದ ಒಂದು ಇಂಚನ್ನು ಬಿಟ್ಟುಕೊಡುವುದಿಲ್ಲ. ನಾವು ಶಾಂತಿಯನ್ನು ಪ್ರೀತಿಸುವ ಜನ. ಯಾವುದೇ ರಾಷ್ಟ್ರದ ಮೇಲೆ ದಾಳಿ ಮಾಡುವುದಿಲ್ಲ. ಇದು ನಮ್ಮ ವಿಶೇಷತೆ. ನಾವು ಯುದ್ಧವನ್ನು ಬಯಸುವುದಿಲ್ಲ. ಹಿಂಸಾಚಾರಗಳು ನಮಗೆ ಬೇಕಿಲ್ಲ. ನಮಗೆ ಶಾಂತಿ ಬೇಕು. ನೆರೆರಾಷ್ಟ್ರದೊಂದಿಗೆ ಉತ್ತಮ ಸಂಬಂಧ ಹೊಂದುವುದು ನಮಗೆ ಬೇಕು. ನಮ್ಮಂತೆಯೇ ಅವರೂ ನಡೆದುಕೊಳ್ಳಬೇಕು. ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂಬುದನ್ನು ಅವರು ನೆನೆಯಬೇಕು. ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಒಂದನ್ನು ಇಂಚು ತೆಗೆದುಕೊಳ್ಳಲು ನಾವು ಬಿಡುವುದಿಲ್ಲ ಎಂದಿದ್ದಾರೆ.
ನಂತರ ಭಯೋತ್ಪಾದನೆಯನ್ನು ಪ್ರಾಯೋಜಿಸುತ್ತಿರುವ ಪಾಕಿಸ್ತಾನ ವಿರುದ್ಧ ಕಿಡಿಕಾರಿರುವ ಅವರು, ಪಾಕಿಸ್ತಾನ ಭಯೋತ್ಪಾದನೆಗೆ ಆರ್ಥಿಕ ನೆರವು ನೀಡುತ್ತಿದ್ದು, ಕಾಶ್ಮೀರದಲ್ಲಿ ಹಿಂಸಾಚಾರಗಳನ್ನು ಸೃಷ್ಟಿಸುತ್ತಿದೆ. ನಮ್ಮದು ಶಾಂತಿ ಬಯಸುವ ದೇಶವಾಗಿದ್ದು, ಯುದ್ಧವನ್ನು ಬಯಸುವುದಿಲ್ಲ. ನಮ್ಮ ಶಾಂತಿಗೆ ಧಕ್ಕೆ ತರುವ ಪ್ರಯತ್ನಗಳನ್ನು ಮಾಡಿದರೆ, ನಮ್ಮ ವೀರ ಯೋಧರು ತಕ್ಕ ಪ್ರತ್ಯುತ್ತರವನ್ನು ನೀಡುತ್ತಾರೆಂದು ತಿಳಿಸಿದ್ದಾರೆ.