ನವದೆಹಲಿ: ಎಲ್ಲಾ ವಿಮಾನಗಳಲ್ಲಿ ಸಮ ಸಂಖ್ಯೆಯಲ್ಲಿ ಇಂಗ್ಲಿಷ್ ಮತ್ತು ಹಿಂದಿ ಭಾಷೆಯ ಪತ್ರಿಕೆಗಳು ಮತ್ತು ಮ್ಯಾಗಜೀನ್ ಗಳನ್ನು ಪ್ರಯಾಣಿಕರಿಗೆ ಓದಲು ಒಯ್ಯಬೇಕು ಎಂದು ಭಾರತೀಯ ವಿಮಾನಯಾನ ಇಲಾಖೆಯ ನಾಗರಿಕ ವಾಯುಯಾನ ನಿರ್ದೇಶನಾಲಯ ಎಲ್ಲಾ ವಿಮಾನಯಾನ ಸಂಸ್ಥೆಗಳಿಗೆ ಸೂಚನೆ ನೀಡಿದೆ.
ಪ್ರಯಾಣಿಕರಿಗೆ ಇಂಗ್ಲಿಷ್ ಜೊತೆಗೆ ಹಿಂದಿ ಭಾಷೆಯ ದಿನ ಪತ್ರಿಕೆ, ವಾರ ಪತ್ರಿಕೆಗಳು ಕೂಡ ಸಿಗಬೇಕೆಂಬ ದೃಷ್ಟಿಯಿಂದ ಈ ಸೂಚನೆ ನೀಡಲಾಗಿದೆ.
ಸಾಮಾನ್ಯವಾಗಿ ಭಾರತೀಯ ವಿಮಾನಗಳಲ್ಲಿ ಹಿಂದಿ ಭಾಷೆಯ ಪತ್ರಿಕೆಗಳು ಮತ್ತು ಮ್ಯಾಗಜಿನ್ ಗಳನ್ನು ಒಯ್ಯುವುದಿಲ್ಲ. ಇದ್ದರೂ ಕಡಿಮೆ ಸಂಖ್ಯೆಯಲ್ಲಿರುತ್ತದೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯದ ಜಂಟಿ ಕಾರ್ಯದರ್ಶಿ ಜನರಲ್ ಲಲಿತ್ ಗುಪ್ತಾ ಹೇಳಿದ್ದಾರೆ.
ಇದು ಭಾರತೀಯ ಒಕ್ಕೂಟದ ಅಧಿಕೃತ ಭಾಷಾ ನೀತಿಗೆ ವಿರುದ್ಧವಾಗಿರುವುದರಿಂದ ವಿಮಾನಗಳಲ್ಲಿ ಸಮ ಸಂಖ್ಯೆಯಲ್ಲಿ ಹಿಂದಿ ಮತ್ತು ಇಂಗ್ಲಿಷ್ ಪತ್ರಿಕೆಗಳನ್ನು ಪ್ರಯಾಣಿಕರಿಗೆ ಒದಗಿಸಿ ಎಂದು ಅವರು ವಿಮಾನಯಾನ ಸಂಸ್ಥೆಗಳಿಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ.
ಹಿಂದಿ ಭಾಷೆಯನ್ನು ಉತ್ತೇಜಿಸುವ ಸಲುವಾಗಿ ಈ ಕ್ರಮವಾಗಿದೆ.
ಆದರೆ ನಾಗರಿಕ ವಿಮಾನಯಾನ ನಿರ್ದೇಶನಾಲಯದ ಈ ಕ್ರಮವನ್ನು ಕಾಂಗ್ರೆಸ್ ನಾಯಕ ಶಶಿ ತರೂರ್ ಟೀಕಿಸಿದ್ದಾರೆ. ನಾಗರಿಕ ವಿಮಾನಯಾನ ನಿರ್ದೇಶನಾಲಯ ಇದೀಗ ಭಾರತೀಯ ವಿಮಾನಗಳಲ್ಲಿ ಹಿಂದಿ ಪತ್ರಿಕೆಗಳನ್ನು ಕೂಡ ವಿತರಿಸಲು ಬಯಸಿದೆ( ಸಸ್ಯಾಹಾರದೊಂದಿಗಿಯೇ? ಎಂದು ಗೇಲಿ ಮಾಡಿದ್ದಾರೆ.
ಈ ತಿಂಗಳ ಆರಂಭದಲ್ಲಿ ಏರ್ ಇಂಡಿಯಾ ಸ್ಥಳೀಯ ವಿಮಾನಗಳಲ್ಲಿ ಎಕಾನಮಿ ಕ್ಲಾಸ್ ನ ಪ್ರಯಾಣಿಕರಿಗೆ ಮಾಂಸಾಹಾರ ನೀಡುವುದನ್ನು ನಿಲ್ಲಿಸಲು ನಿರ್ಧರಿಸಿತ್ತು. ಭಾರತ ಸರ್ಕಾರ ಧಾರ್ಮಿಕ ತತ್ವಗಳನ್ನು ವಿಮಾನಗಳಲ್ಲಿಯೂ ಪ್ರಚಾರ ಮಾಡುತ್ತದೆ ಎಂದು ಕೆಲವರು ಈ ನಡೆಯನ್ನು ವಿರೋಧಿಸಿದ್ದರು. ಆದರೆ ವೆಚ್ಚವನ್ನು ಕಡಿತಗೊಳಿಸಲು ಏರ್ ಇಂಡಿಯಾ ಈ ಕ್ರಮ ಕೈಗೊಂಡಿದೆ ಎಂದು ಸ್ಪಷ್ಟಪಡಿಸಿತ್ತು.