ಗುಜರಾತ್ ರಾಜ್ಯ ಮುಖ್ಯಮಂತ್ರಿ ವಿಜಯ್ ರುಪಾನಿ
ರಾಜ್ಕೋಟ್: ಪುತ್ರ ರಾಹುಲ್ ಗಾಂಧಿ ಮೇಲೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗಿರುವ ಕುರುಡು ಪ್ರೀತಿಯೇ ಕಾಂಗ್ರೆಸ್ ಪತನಕ್ಕೆ ಕಾರಣವಾಗುತ್ತಿದೆ ಎಂದು ಗುಜರಾತ್ ರಾಜ್ಯ ಮುಖ್ಯಮಂತ್ರಿ ವಿಜಯ್ ರುಪಾನಿಯವರು ಭಾನುವಾರ ಹೇಳಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಸೋನಿಯಾ ಗಾಂಧಿಯವರಿಗೆ ತಮ್ಮ ಪುತ್ರನ ಮೇಲಿರುವ ಅಪಾರವಾದ ಪ್ರೀತಿಯೇ ದೇಶದಾದ್ಯಂತ ಕಾಂಗ್ರೆಸ್ ಪತನಗೊಳ್ಳಲು ಕಾರಣವಾಗುತ್ತಿದೆ. ಇಂದು ಕಾಂಗ್ರೆಸ್ ನಲ್ಲಿರುವ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟಿದೆ. ಯಾರೊಬ್ಬರೂ ಅವರ ನಿಯಮಗಳನ್ನು ಒಪ್ಪಿಕೊಳ್ಳುತ್ತಿಲ್ಲ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷ ಸೂಕ್ಷ್ಮತೆಯಿಲ್ಲದ ಹಾಗೂ ಬೇಜವಾಬ್ದಾರಿತನದಿಂದ ವರ್ತಿಸುತ್ತಿದೆ. ರಾಜ್ಯ ಪ್ರವಾಹ ಸಂಕಷ್ಟಕ್ಕೆ ಸಿಲುಕಿರುವ ಸಂದರ್ಭದಲ್ಲಿಯೇ ತಮ್ಮ ಪಕ್ಷದ 40 ಶಾಸಕರನ್ನು ಬೆಂಗಳೂರಿನ ರೆಸಾರ್ಟ್ ನಲ್ಲಿರಿಸಿದೆ.
ಪ್ರವಾಹ ನಿರ್ವಹಣೆಗೆ ಪ್ರಾಮುಖ್ಯತೆ ನೀಡುವುದಕ್ಕಿಂತಲೂ ರಾಜ್ಯಸಭೆಗೆ ಅಹ್ಮದ್ ಪಟೇಲ್ ರನ್ನು ಕಳುಹಿಸುವುದೇ ಕಾಂಗ್ರೆಸ್ ಮುಖ್ಯವಾಗಿದೆ. ಇಂದು ಗುಜರಾತ್ ಪ್ರವಾಹದಿಂದಾಗಿ ಸಂಕಷ್ಟಕ್ಕೆ ಸಿಲುಕಿಕೊಂಡಿದೆ. ಆದರೆ, ಕಾಂಗ್ರೆಸ್'ಗೆ ಯಾವ ಕಾಳಜಿ ಹಾಗೂ ಕಳವಳಗಳಿಲ್ಲ. ಶೀಘ್ರದಲ್ಲಿಯೇ ಕಾಂಗ್ರೆಸ್ ಕೂಡ ಪ್ರವಾಹದಲ್ಲಿ ಮುಳುಗಿ ಹೋಗಲಿದೆ ಎಂದು ತಿಳಿಸಿದ್ದಾರೆ.
ಆಪರೇಶನ್ ಕಮಲಕ್ಕೆ ಸಿಲುಕಿ ಈ ವರೆಗೂ ಗುಜರಾತ್ ನ ಕಾಂಗ್ರೆಸ್ ಪಕ್ಷದ 6 ಶಾಸಕರು ರಾಜೀನಾಮೆ ನೀಡಿದ್ದಾರೆ. ಇನ್ನೂ ಹಲವರು ರಾಜೀನಾಮೆ ನೀಡಬಹುದು ಎಂಬ ಭಯದಿಂದ 44 ಕೈ ಶಾಸಕರನ್ನು ಬೆಂಗಳೂರಿಗೆ ಶುಕ್ರವಾರ ರಾತ್ರೋರಾತ್ರಿ ಕಳುಹಿಸಲಾಗಿದೆ. ಹೀಗಾಗಿ ಆ.8ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆವರೆಗೂ ಇವರೆಲ್ಲರೂ ಬೆಂಗಳೂರನಲ್ಲಿಯೇ ಇರಲಿದ್ದಾರೆಂದು ಹೇಳಲಾಗುತ್ತಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos