ಹೈದರಾಬಾದ್: ಜುಲೈ 1 ರಿಂದ ದೇಶಾದ್ಯಂತ ಜಿಎಸ್ ಟಿ ಜಾರಿಯಾಗಲಿದ್ದು, ಹಲವು ವಿಭಾಗಗಳ ಉತ್ಪನ್ನಗಳ ಬೆಲೆಯಲ್ಲಿ ಬದಲಾವಣೆಗಳಾಗಲಿವೆ. ಜಿಎಸ್ ಟಿ ಜಾರಿಯ ನಂತರ ವಿಕಲಾಂಗ ಚೇತನರು ಬಳಕೆ ಮಾಡುವ ಉಪಕರಣಗಳ ಬೆಲೆಯೂ ಏರಿಕೆಯಾಗಲಿದೆ.
ಜಿಎಸ್ ಟಿ ಕೌನ್ಸಿಲ್ ನಿಗದಿಪಡಿಸಿರುವ ತೆರಿಗೆ ದರಕ್ಕೆ ವಿವಿಧ ಕ್ಷೇತ್ರಗಳಿಗೆ ಸಂಬಂಧಪಟ್ಟವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೇ.16-18 ರ ವರೆಗೆ ಸಭೆ ಸೇರಿದ ಜಿಎಸ್ ಟಿ ಕೌನ್ಸಿಲ್ ಬ್ರೈಲ್ ಪೇಪರ್ ಗೆ ಶೇ.8 ರಷ್ಟು ತೆರಿಗೆ ಹಾಗೂ ಟೈಪ್ ರೈಟರ್ (ಬೆರಳಚ್ಚು ಯಂತ್ರಗಳು) ಗಳಿಗೆ ಶೇ.12 ರಷ್ಟು, ವಿಕಲಾಂಗ ಚೇತನರು ಬಳಕೆ ಮಾಡುವ ವ್ಹೀಲ್ ಚೇರ್ ಹಾಗೂ ಇತರ ಸಾಧನಗಳಿಗೆ ಶೇ.5 ರಷ್ಟು, ಹಿಯರಿಂಗ್ ಏಡ್ ಗಳಿಗೆ ಶೇ.12 ರಷ್ಟು ತೆರಿಗೆ ವಿಧಿಸಲು ನಿರ್ಧರಿಸಿತ್ತು.
ಜಿಎಸ್ ಟಿ ಜಾರಿಗೂ ಮುನ್ನ ಇರುವ ವ್ಯವಸ್ಥೆಯಲ್ಲಿ ವಿಕಲಾಂಗ ಚೇತನರು ಬಳಕೆ ಮಾಡುವ ಸಾಧನಗಳಿಗೆ ಅಬಕಾರಿ ಹಾಗೂ ಸೀಮಾಸುಂಕದ ವಿನಾಯಿತಿ ನೀಡಲಾಗಿತ್ತು. ಆದರೆ ಜಿಎಸ್ ಟಿ ಜಾರಿಯಾದ ಬಳಿಕ ವಿಕಲಾಂಗ ಚೇತನರು ಬಳಕೆ ಮಾಡುವ ಸಾಧನಗಳಿಗೆ ತೆರಿಗೆ ವಿಧಿಸಲಾಗುವುದರಿಂದ ವಿಕಲಾಂಗ ಚೇತನರಿಗೆ ಜಿಎಸ್ ಟಿ ದುಬಾರಿಯಾಗಲಿದೆ ಎಂದು ವಿಕಲಾಂಗ ಚೇತನರ ಸಂಸ್ಥೆಯ ಸಿಇಒ ಎಂ ಪ್ರಣವ್ ಕುಮಾರ್ ಹೇಳಿದ್ದಾರೆ.
ತೆಲಂಗಾಣದ 10 ಲಕ್ಷ ವಿಕಲಾಂಗ ಚೇತನರಿಗೆ ಜಿಎಸ್ ಟಿ ದುಬಾರಿಯಾಗಲಿದ್ದು, ಜಿಎಸ್ ಟಿಯನ್ನು ಕೈಬಿಡಬೇಕೆಂದು ಅಖಿಲ ಭಾರತ ವಿಕಲಾಂಗ ಚೇತನರ ಒಕ್ಕೂಟದ ತೆಲಂಗಾಣದ ಸಹ ಸಂಸ್ಥೆಯ ಸದಸ್ಯ ಚೊಕ್ಕ ರಾವ್ ಆಗ್ರಹಿಸಿದ್ದಾರೆ.
ಬ್ರೈಲ್ ಪಠ್ಯಪುಸ್ತಕ ಹಾಗೂ ಪೇಪರ್ ಗಳನ್ನು ಜಿಎಸ್ ಟಿಯಿಂದ ಮುಕ್ತಗೊಳಿಸಬೇಕು ಎಂಬುದು ಚೊಕ್ಕ ರಾವ್ ಅವರ ಆಗ್ರಹವಾಗಿದ್ದು, ಬಡತನದಲ್ಲಿರುವ ವಿಕಲಾಂಗ ಚೇತನರಿಗೆ ಇದರಿಂದ ಸಮಸ್ಯೆಯಾಗಲಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos