ಲಖನೌ: ಬಾಲಕಿಯರ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಇನ್ನುಮಂದೆ 10ನೇ ತರಗತಿ ಪಾಸ್ ಮಾಡುವ ಉತ್ತರ ಪ್ರದೇಶದ ಪ್ರತಿ ಬಾಲಕಿಗೂ 10 ಸಾವಿರ ರುಪಾಯಿ ನಗದು ಬಹುಮಾನ ನೀಡುವುದಾಗಿ ಮಂಗಳವಾರ ಘೋಷಿಸಿದೆ.
10ನೇ ತರಗಿತ ಪಾಸ್ ಮಾಡುವ ರಾಜ್ಯದ ಪ್ರತಿ ಬಾಲಕಿಗೂ ಕನ್ಯಾ ವಿದ್ಯಾಧಾನ ಯೋಜನೆಯಡಿ 10 ಸಾವಿರ ರುಪಾಯಿ ಬಹುಮಾನ ನೀಡಲಾಗುವುದು ಎಂದು ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ದಿನೇಶ್ ಶರ್ಮಾ ಅವರು ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಈಗಾಗಲೇ 2017ನೇ ಸಾಲಿನ ಸಿಬಿಎಸ್ ಇ ಮತ್ತು ಐಸಿಎಸ್ ಇ ಮಂಡಳಿಯ 10ನೇ ತರಗತಿಯ ಫಲಿತಾಂಶ ಪ್ರಕಟವಾಗಿದೆ. ಆದರೆ ಉತ್ತರ ಪ್ರದೇಶ ಪ್ರೌಢಶಿಕ್ಷಣ ಮಂಡಳಿಯ 10ನೇ ತರಗತಿಯ ಫಲಿತಾಂಶ ಇನ್ನು ಪ್ರಕಟಿಸಬೇಕಿದೆ.
ಇನ್ನು ಬಡ ಮುಸ್ಲಿಂ ಹೆಣ್ಣುಮಕ್ಕಳ ಮದುವೆ ಮಾಡಲು ಸಹ ಉತ್ತರ ಪ್ರದೇಶ ಬಿಜೆಪಿ ಸರ್ಕಾರ ಸಿದ್ಧವಾಗಿದ್ದು, ಈ ಸಂಬಂಧ ಸಾಮೂಹಿಕ ವಿವಾಹ ಆಯೋಜಿಸುವ ಕುರಿತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಈಗಾಗಲೇ ಒಪ್ಪಿಗೆ ನೀಡಿದ್ದಾರೆ. ಇದನ್ನು ಸರ್ಕಾರದ 100 ದಿನಗಳ ಕಾರ್ಯಕ್ರಮದಲ್ಲಿ ಸೇರಿಸಲಾಗಿದೆ ಎಂದು ಅಲ್ಪ ಸಂಖ್ಯಾತ ಸಚಿವ ಮೋಹ್ಸಿನ್ ರಾಜಾ ಅವರು ಹೇಳಿದ್ದಾರೆ.