ಮುಂಬೈ: ಆಹಾರ ಅವರವರ ಆಯ್ಕೆಯ ವಿಚಾರಕ್ಕೆ ಸಂಬಂಧಪಟ್ಟಿದ್ದು, ನಾನೂ ಕೂಡ ಒಬ್ಬ ಮಾಂಸಾಹಾರಿ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು ಮಂಗಳವಾರ ಹೇಳಿದ್ದಾರೆ.
ದೇಶದಲ್ಲಿರುವ ಪ್ರತೀಯೊಬ್ಬ ನಾಗರಿಕರನನ್ನು ಸಸ್ಯಾಹಾರಿಯಾಗಿ ಮಾಡಲು ಬಿಜೆಪಿ ಹೊರಟಿದೆ ಎಂಬ ಆರೋಪದ ಸಂಬಂಧ ಮುಂಬೈನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಕಿಡಿಕಾರಿದ ಅವರು, ತಲೆಕೆಟ್ಟ ಕೆಲ ಜನರು ಈ ರೀತಿಯ ವಿಚಾರಗಳನ್ನು ಮಾತನಾಡುತ್ತಿದ್ದಾರೆ. ಏನನ್ನು ತಿನ್ನಬೇಕು, ಏನನ್ನು ತಿನ್ನಬಾರದು ಎಂಬುದು ಜನರ ಆಯ್ಕೆಗೆ ಬಿಟ್ಟದ್ದು ಎಂದು ಹೇಳಿದ್ದಾರೆ.
ಕೇಂದ್ರದ ಆದೇಶ ಕುರಿತಂತೆ ರಾಜಕೀಯ ಆಟವನ್ನು ಆಡಲಾಗುತ್ತಿದೆ. ಕೆಲವರು ದೇಶದ ಪ್ರತಿ ಪ್ರಜೆಗಳನ್ನು ಸಸ್ಯಹಾರಿಯಾಗಿ ಮಾಡಲು ಬಿಜೆಪಿ ಯತ್ನಿಸುತ್ತಿದೆ ಎಂದು ಆರೋಪ ಮಾಡುತ್ತಿದ್ದಾರೆ. ಈ ಬಗ್ಗೆ ಕೆಲ ಮಾಧ್ಯಮಗಳು ಚರ್ಚೆಗಳನ್ನು ಕೂಡ ನಡೆಸಿವೆ. ಹೈದರಾಬಾದ್ ನಲ್ಲಿ ನಾನು ಬಿಜೆಪಿ ಮುಖ್ಯಸ್ಥನಾಗಿದ್ದೇನೆ. ನಾನು ಕೂಡ ಮಾಂಸಾಹಾರಿ. ಆದರೂ ನಾನು ಪಕ್ಷದ ಮುಖ್ಯಸ್ಥನಾಗಿದ್ದೇನೆಂದು ತಿಳಿಸಿದ್ದಾರೆ.