ನವದೆಹಲಿ: 3 ವರ್ಷಗಳು ಪೂರ್ಣಗೊಂಡಿರುವುದರಿಂದ ತಮ್ಮನ್ನು ಅಟಾರ್ನಿ ಜನರಲ್ ಹುದ್ದೆಯಿಂದ ಕೈ ಬಿಡುವಂತೆ ಮುಕುಲ್ ರೋಹ್ಟಗಿ ಅವರು ಕೇಂದ್ರ ಮೋದಿ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
ದೇಶದ ಉನ್ನತ ಕಾನೂನು ಅಧಿಕಾರಿ ಹುದ್ದೆಗೆ 2ನೇ ಅವಧಿಗೆ ಮುಂದುವರಿಯಲು ತಮಗೆ ಆಸಕ್ತಿಯಿಲ್ಲ ಎಂಬುದಾಗಿ ಸರ್ಕಾರಕ್ಕೆ ಕಳೆದ ತಿಂಗಳೇ ಪತ್ರವನ್ನು ಬರೆದಿದ್ದೇನೆಂದು ರೊಹ್ಟಗಿಯವರು ಹೇಳಿದ್ದಾರೆ.
ಖಾಸಗಿ ಕಾನೂನು ಸೇವೆಗೆ ಮರಳಲು ನಾನು ಬಯಸಿದ್ದೇನೆ. ನನ್ನ ಹಾಗೂ ಸರ್ಕಾರದ ನಡುವೆ ಉತ್ತಮ ಸಂಬಂಧವಿದ್ದು, ನಾನು ಬದುಕಿರುವವರೆಗೂ ಸರ್ಕಾರಕ್ಕೆ ನೆರವಿಗೆ ಬರುತ್ತೇನೆಂದು ತಿಳಿಸಿದ್ದಾರೆ.
ರೊಹ್ಟಗಿಯವರ ದಿಢೀರ್ ನಿರ್ಧಾರ ಸರ್ಕಾರಕ್ಕೆ ಆಘಾತವನ್ನು ತಂದಿದೆ. 2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ರೊಹ್ಟಗಿ ಅವರನ್ನು ಅಟಾರ್ನಿ ಜನರಲ್ ಆಗಿ ನೇಮಕಗೊಳಿಸಲಾಗಿತ್ತು. ಇವರ ಸ್ಥಾನಕ್ಕೆ ಖ್ಯಾತ ವಕೀಲ ಹರೀಶ್ ಸಾಳ್ಮೆ ಮತ್ತು ಸಾಲಿಸಿಟರ್ ಜನರಲ್ ರಂಜಿತ್ ಕುಮಾರ್ ಅವರ ಹೆಸರು ಚಾಲ್ತಿಯಲ್ಲಿದೆ.