ದೇಶ

ಸುಷ್ಮಾ ಸ್ವರಾಜ್ ಸಹಾಯ: ಹೃದಯ ಚಿಕಿತ್ಸೆಗೆ 4 ತಿಂಗಳ ಮಗು ಪಾಕಿಸ್ತಾನದಿಂದ ದೆಹಲಿಗೆ ಆಗಮನ

Sumana Upadhyaya
ನವದೆಹಲಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಭರವಸೆ ಮೇರೆಗೆ ನಾಲ್ಕು ತಿಂಗಳ ಮಗು ರೊಹಾನ್ ಗೆ ಚಿಕಿತ್ಸೆ ಕೊಡಿಸಲು ಆತನ ಪೋಷಕರು ಪಾಕಿಸ್ತಾನದಿಂದ ನಿನ್ನೆ ನೊಯ್ಡಾಗೆ ಆಗಮಿಸಿದರು. ರೊಹಾನ್  ಗೆ ದೆಹಲಿಯ ಜೇಪೀ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಹೃದಯದಲ್ಲಿ ರಂಧ್ರ ಹೊಂದಿರುವ ರೊಹಾನ್  ಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಬೇಕೆಂದು ವೈದ್ಯರು ಸಲಹೆ ನೀಡಿದ್ದರು. ದೆಹಲಿಯಲ್ಲಿ ಚಿಕಿತ್ಸೆ ನೀಡುವುದು ಉತ್ತಮ ಎಂದು ಕೂಡ ಹೇಳಲಾಗಿತ್ತು. ಆದರೆ ಭಾರತ-ಪಾಕಿಸ್ತಾನ ನಡುವೆ ಗಡಿ ಭಾಗದಲ್ಲಿನ ಉದ್ವಿಗ್ನ ವಾತಾವರಣದಿಂದಾಗಿ  ರೊಹಾನ್ ನ ಪೋಷಕರಿಗೆ ವೈದ್ಯಕೀಯ ವೀಸಾ ಸಿಕ್ಕಿರಲಿಲ್ಲ.
ಇದರಿಂದ ರೊಹಾನ್ ನ ತಂದೆ ಕನ್ವಲ್ ಸಾದಿಕ್ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಸಂಪರ್ಕಿಸಿ ವೈದ್ಯಕೀಯ ವೀಸಾ ಕೊಡಿಸುವಂತೆ ಮನವಿ ಮಾಡಿದರು. ಮನವಿ ಬಂದ ತಕ್ಷಣ ಪರಿಶೀಲಿಸಿದ ಸಚಿವೆ ಸುಷ್ಮಾ ಸ್ವರಾಜ್ ರೋಹನ್ ನ ಕುಟುಂಬಕ್ಕೆ ವೈದ್ಯಕೀಯ ವೀಸಾ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. 
ಇದೀಗ ರೊಹಾನ್ ನನ್ನು ಕರೆದುಕೊಂಡು ಆತನ ಪೋಷಕರು ವಾಘಾ ಗಡಿ ದಾಟಿ ಭಾರತಕ್ಕೆ ಬಂದಿದ್ದಾರೆ.
ಜೇಪೀ ಆಸ್ಪತ್ರೆಗೆ ತಲುಪಿರುವ ರೊಹಾನ್  ಪೋಷಕರು ಮಾಧ್ಯಮಗಳೊಂದಿಗೆ ಮಾತನಾಡಿ, ಪಾಕಿಸ್ತಾನದಲ್ಲಿ ತಾವು ತಮ್ಮ ಮಗುವಿನ ಆರೋಗ್ಯ ತಪಾಸಣೆ ಮಾಡಿಸಿದಾಗ ಹೃದಯದಲ್ಲಿ ಒಂದು ರಂಧ್ರವಿರುವುದಲ್ಲದೆ ಹೃದಯದ ನರಗಳಲ್ಲಿ ಸಹ ತೊಂದರೆಯಿದೆ ಎಂದು ವೈದ್ಯರು ಹೇಳಿದರು. ಅದಕ್ಕೆ ಪಾಕಿಸ್ತಾನದಲ್ಲಿ ಚಿಕಿತ್ಸೆ ದೊರಕುವುದಿಲ್ಲ. ದೆಹಲಿಯ ಜೇಪೀ ಆಸ್ಪತ್ರೆಯನ್ನು ವೈದ್ಯರು ಉಲ್ಲೇಖಿಸಿದರು ಎನ್ನುತ್ತಾರೆ. ಮಗುವಿಗೆ ಇದೇ 15ರಂದು ಚಿಕಿತ್ಸೆಗೊಳಪಡಿಸುವ ಸಾಧ್ಯತೆಯಿದೆ.
SCROLL FOR NEXT