ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್
ಮುಂಬೈ: ರೈತರ ಸಾಲ ಮನ್ನಾ ಮಾಡದಿದ್ದರೆ ಬಿಜೆಪಿ ವಿರುದ್ಧ ಕಠಿಣ ನಿರ್ಧಾರ ತೆಗೆದುಕೊಳ್ಳುತ್ತೇವೆಂದು ಎಚ್ಚರಿಸಿದ್ದ ಶಿವಸೇನೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ತಿರುಗೇಟು ನೀಡಿದ್ದು, ಮಧ್ಯಂತರ ಚುನಾವಣೆಗೆ ನಾವು ಸಿದ್ಧರಿದ್ದೇವೆಂದು ಗುರುವಾರ ಹೇಳಿದ್ದಾರೆ.
ಶಿವಸೇನೆ ನೀಡಿದ್ದ ಎಚ್ಚರಿಕೆ ಕುರಿತಂತೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿ ಪ್ರತಿಕ್ರಿಯೆ ನೀಡಿರುವ ಅವರು, ಕೆಲವರು ಸರ್ಕಾರವನ್ನು ಕೆಳಗಿಸುತ್ತೇವೆಂದು ಕೆಲಸವರು ಹೇಳುತ್ತಿದ್ದಾರೆ. ಮಧ್ಯಂತರ ಚುನಾವಣೆಗೆ ನಾವು ಸಿದ್ಧರಿದ್ದೇವೆಂಬ ಮಾತನ್ನು ಅಂತಹ ಜನರಿಗೆ ನಾನು ಹೇಳಲು ಇಚ್ಛಿಸುತ್ತೇನೆಂದು ಹೇಳಿದ್ದಾರೆ.
ಕೆಲವರು ಮಧ್ಯಂತರ ಚುನಾವಣೆ ನಡೆಸಲು ನಮ್ಮ ಪ್ರಚೋಜನೆ ನೀಡಿದ್ದೇ ಆದರೆ, ನಾವು ಮಧ್ಯಂತರ ಚುನಾವಣೆಗೆ ಸಿದ್ಧರಿದ್ದೇವೆ. ಮತ್ತೆ ರಾಜ್ಯದಲ್ಲಿ ಸರ್ಕಾರ ರಚನೆ ಮಾಡುವ ವಿಶ್ವಾಸ ನನಗಿದೆ ಎಂದು ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ನಡೆದಿದ್ದ ಸ್ಥಳೀಯ ಚುನಾವಣೆಯಲ್ಲಿಯೂ ಬಿಜೆಪಿ ಗೆಲವು ಸಾಧಿಸಿತ್ತು. ರಾಜ್ಯದ ಜನತೆ ನಮ್ಮೊಂದಿಗಿದ್ದಾರೆಂಬ ವಿಶ್ವಾಸ ನನಗಿದೆ. ಯಾವುದೇ ಪಕ್ಷಗಳು ಸಾಧಿಸದ ಯಶಸ್ಸನ್ನು ನಾವು ಸಾಧಿಸಿದ್ದೇವೆ. ಕಾಂಗ್ರೆಸ್-ಎನ್'ಸಿಪಿ ಪಕ್ಷಗಳೂ ಕೂಡ ಇಂತಹ ಯಶಸ್ಸನ್ನು ಗಳಿಸಿರಲಿಲ್ಲ. ಜನರು ಸರ್ಕಾರದ ಮೇಲೆ ನಂಬಿಕೆ ಇಟ್ಟಿದ್ದಾರೆಂದು ಹೇಳಿದ್ದಾರೆ.
ನಿನ್ನೆಯಷ್ಟೇ ರೈತರ ಜೊತೆಗೆ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ್ದ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆಯವರು, ರೈತರ ಸಾಲ ಮನ್ನಾ ಮಾಡಲು ಕೇಂದ್ರ ಸರ್ಕಾರಕ್ಕೆ ನಾನು ಜುಲೈ ತಿಂಗಳವರೆಗೂ ಕಾಲಾವಕಾಶವನ್ನು ನೀಡುತ್ತಿದ್ದೇನೆ. ಒಂದು ವೇಳೆ ಸರ್ಕಾರ ರೈತರ ಸಾಲ ಮನ್ನಾ ಮಾಡದೇ ಹೋದಲ್ಲಿ ಬಿಜೆಪಿ ವಿರುದ್ಧ ಕಠಿಣ ನಿರ್ಧಾರ ತೆಗೆದುಕೊಳ್ಳುತ್ತೇವೆಂದು ಎಚ್ಚರಿಸಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos