ಮುಂಬೈ: ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಕಲ್ಯಾಣ ತಾಲ್ಲೂಕಿನ ನೆವಲಿ ಏರ್ ಸ್ಟ್ರಿಪ್ ಹತ್ತಿರ ಇರುವ 1,600 ಎಕರೆಗೂ ಅಧಿಕ ವಿವಾದಿತ ಭೂಮಿಯಲ್ಲಿ ಕಳೆದ 75 ವರ್ಷಗಳಿಂದ ರೈತರು ವ್ಯವಸಾಯ ಮಾಡುತ್ತಾ ಬಂದಿದ್ದಾರೆ. ಆದರೆ ರಕ್ಷಣಾ ಸಚಿವಾಲಯದ ದಾಖಲೆಗಳಲ್ಲಿ ಎಲ್ಲಾ ಭೂಮಿಗಳು ಇಲಾಖೆಯ ಹೆಸರಲ್ಲಿದೆ.
ನಮ್ಮ ಪೂರ್ವಜರ ಕಾಲದಿಂದಲೇ ಈ ಭೂಮಿಯಲ್ಲಿ ಕೃಷಿ ಮಾಡಿಕೊಂಡು ಬಂದಿದ್ದೇವೆ. 2ನೇ ವಿಶ್ವಯುದ್ಧದ ಸಮಯದಲ್ಲಿ ಈ ಭೂಮಿಯನ್ನು ಬ್ರಿಟಿಷ್ ಸರ್ಕಾರ ವಶಪಡಿಸಿಕೊಂಡಿತ್ತು ಎಂದು ನಾವು ಕೂಡ ಕೇಳಿದ್ದೆವು. ಆದರೆ ವಿಶ್ವಯುದ್ಧದ ನಂತರ ಭೂಮಿಯನ್ನು ಮತ್ತೆ ನಮಗೆ ಹಿಂತಿರುಗಿಸಲಾಯಿತು ಎಂದು ನಮ್ಮ ಪೂರ್ವಜರು ಹೇಳುತ್ತಿದ್ದರು. ಅಲ್ಲಿಂದ ನಾವು ಈ ಭೂಮಿಯಲ್ಲಿ ವ್ಯವಸಾಯ ಮಾಡಿಕೊಂಡು ಬಂದಿದ್ದೇವೆ ಎಂದು ರೈತರ ಸಂಘಟನೆಯಾದ ಶ್ರೀ ಮಲಂಗದ್ದ್ ಪರಿಸರ್ ಜಮೀನ್ ಬಚಾವ್ ಆಂದೋಲನ ಸಮಿತಿಯ ಅಧ್ಯಕ್ಷ ಮಾಥುರ್ ಮಟ್ರೆ ತಿಳಿಸಿದ್ದಾರೆ.
ರಕ್ಷಣಾ ಇಲಾಖೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಕಮಾಂಡರ್ ರಾಹುಲ್ ಸಿನ್ಹಾ ನಿನ್ನೆ ಮುಂಬೈಯಲ್ಲಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ, ಭೂಮಿಯು ರಕ್ಷಣಾ ಸಚಿವಾಲಯ/ಭಾರತೀಯ ನೌಕಾಪಡೆ ಮತ್ತು ರಾಜ್ಯ ಸರ್ಕಾರಕ್ಕೆ ಸೇರಿದ್ದಾಗಿದೆ. 7/12 ಉದ್ಧರಣಗಳು ರಕ್ಷಣಾ ಇಲಾಖೆಗೆ ಸೇರಿದ್ದಾಗಿದೆ ಎಂದು ಹೇಳಿದ್ದಾರೆ.