ದೇಶ

ರಾಜಸ್ಥಾನ: ಮೀಸಲಾತಿ ಹೋರಾಟ ಹಿಂಪಡೆದ ಜಾಟ್‌ ನಾಯಕರು

Lingaraj Badiger
ಭರತ್ ಪುರ: ಬೇಡಿಕೆ ಈಡೇರಿಸುವುದಾಗಿ ರಾಜಸ್ಥಾನ ಸರ್ಕಾರ ಭರವಸೆ ನೀಡಿದ ಹಿನ್ನೆಲೆಯಲ್ಲಿ ಭರತ್ ಪುರ ಹಾಗೂ ಧೋಲಾಪುರ ಜಿಲ್ಲೆಯಲ್ಲಿ ಮೀಸಲಾತಿ ಹೋರಾಟ ಹಿಂಪಡೆದಿರುವುದಾಗಿ ಶನಿವಾರ ಜಾಟ್ ಸಮುದಾಯದ ನಾಯಕರು ಘೋಷಿಸಿದ್ದಾರೆ.
ಹಿಂದುಳಿದ ಜಾತಿಯ(ಒಬಿಸಿ) ಮೀಸಲಾತಿ ಸೌಲಭ್ಯ ಒದಗಿಸುವ ಕುರಿತು ಶೀಘ್ರದಲ್ಲೇ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳುವುದಾಗಿ ರಾಜ್ಯ ಸರ್ಕಾರ ಭರವಸೆ ನೀಡಿದ ಹಿನ್ನೆಲೆಯಲ್ಲಿ ಜಾಟ್ ನಾಯಕರು ತಮ್ಮ ಪ್ರತಿಭಟನೆಯನ್ನು ಹಿಂಪಡೆದಿದ್ದಾರೆ. ಆದರೆ ಭರತ್ ಪುರ ಮತ್ತು ಧೋಲಾಪುರ್ ಜಿಲ್ಲೆಯ ಜಾಟ್ ಸಮುದಾಯವನ್ನು ಒಬಿಸಿಗೆ ಸೇರಿಸುವ ಕುರಿತು ಲಿಖಿತ ಭರವಸೆ ನೀಡಬೇಕು. ಇಲ್ಲದಿದ್ದರೆ ದೇಶದ ಇತರೆ ಭಾಗಗಳಿಗೂ ತಮ್ಮ ಹೋರಾಟವನ್ನು ವಿಸ್ತರಿಸುವುದಾಗಿ ಎಚ್ಚರಿಸಿದ್ದಾರೆ.
ಭರತ್‌ಪುರಕ್ಕೆ ಬರುತ್ತಿದ್ದ ಎರಡು ರೈಲುಗಳ ಮಾರ್ಗವನ್ನು ಬದಲಿಸಲಾಗಿದೆ ಮತ್ತು ಮೂರು ರೈಲುಗಳ ಸಂಚಾರವನ್ನು ರದ್ದುಪಡಿಸಲಾಗಿದೆ. ಅಲ್ಲದೆ ಹೆದ್ದಾರಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿರುವುದರಿಂದ ಪ್ರಯಾಣಿಕರು ಪರದಾಡಿದರು.
ಹಿಂದೂಳಿದ ವರ್ಗಗಳ ಆಯೋಗ ಜೂನ್ 22ರಂದು ಮುಖ್ಯಮಂತ್ರಿ ವಸುಂಧರಾ ರಾಜೆ ಅವರಿಗೆ ಸಲ್ಲಿಸಿದ ವರದಿಯನ್ನು ಆಧರಿಸಿ ರಾಜ್ಯ ಸರ್ಕಾರ ಭರತ್ ಪುರ ಮತ್ತು ಧೋಲಾಪುರ್ ಜಿಲ್ಲೆಯ ಜಾಟ್ ಸಮುದಾಯವನ್ನು ಒಬಿಸಿಗೆ ಸೇರಿಸಲು ಮುಂದಾಗಿದೆ.
ಮೀಸಲಾತಿಗೆ ಒತ್ತಾಯಿಸಿ ಕಳೆದ ಹಲವು ದಿನಗಳಿಂದ ತೀವ್ರ ಹೋರಾಟ ನಡೆಸುತ್ತಿದ್ದ ಜಾಟ್ ಸಮುದಾಯ ನಿನ್ನೆ ಭರತ್ ಪುರದಲ್ಲಿ ರೈಲು ತಡೆದು ಪ್ರತಿಭಟಿಸಿದ್ದರು.
SCROLL FOR NEXT