ಮಲಯಾಳಂ ನಟ ದಿಲೀಪ್(ಸಂಗ್ರಹ ಚಿತ್ರ)
ಕೊಚ್ಚಿ: ಕೆಲ ತಿಂಗಳ ಹಿಂದೆ ಮಲಯಾಳಂನ ಖ್ಯಾತ ನಟಿಯೊಬ್ಬರ ಅಪಹರಣಕ್ಕೆ ಸಂಬಂಧಪಟ್ಟಂತೆ ನಡೆದ ಹೊಸ ಬೆಳವಣಿಗೆಯೊಂದರಲ್ಲಿ, ಪ್ರಮುಖ ಆರೋಪಿ ಪಲ್ಸರ್ ಸುನಿ ಉದ್ದೇಶಪೂರ್ವಕವಾಗಿ ಮಲಯಾಳಂನ ಖ್ಯಾತ ನಟ ದಿಲೀಪ್ ಗೆ ಕಳುಹಿಸಿದ ಪತ್ರ ಇಂದು ಎಲ್ಲೆಡೆ ಸದ್ದು ಮಾಡುತ್ತಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ನಟ ದಿಲೀಪ್, ಸುನಿಯ ಸಹಚರನಿಂದ ತಮಗೆ ಬೆದರಿಕೆ ಬಂದಿದ್ದು, ಈ ಆಧಾರದ ಮೇಲೆ ಪೊಲೀಸರಿಗೆ ದೂರು ನೀಡಿದ್ದೇನೆ ಮತ್ತು ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
ದಿಲೀಪ್ ಮತ್ತು ಅವರ ಸ್ನೇಹಿತ ನಟ-ನಿರ್ದೇಶಕ ನಾದಿರ್ಶ ಟಿವಿ ಚಾನೆಲ್ ವೊಂದಕ್ಕೆ ಮಾತನಾಡಿ, ಪಲ್ಸರ್ ಸುನಿಯ ಸಹ ಜೈಲುವಾಸಿ ಎಂದು ಹೇಳಿ ತಮಗೆ ವ್ಯಕ್ತಿಯೊಬ್ಬನಿಂದ ಮೊಬೈಲ್ ಕರೆ ಬಂದಿದ್ದು, ಈ ಕೇಸಿನಲ್ಲಿ ದಿಲೀಪ್ ಅವರ ಹೆಸರನ್ನು ತರಬಾರದೆಂದರೆ ಒಂದೂವರೆ ಕೋಟಿ ರೂಪಾಯಿ ನೀಡುವಂತೆ ಬೆದರಿಕೆಯೊಡ್ಡಿದ್ದಾನೆ ಎಂದು ಹೇಳಿದ್ದಾರೆ.
ಪಲ್ಸರ್ ಸುನಿ ನಟ ದಿಲೀಪ್ ಅವರ ಸಹಚರನಾಗಿದ್ದು, ಅವರ ಸೂಚನೆಯಂತೆ ನಟಿಯನ್ನು ಅಪಹರಿಸಲಾಗಿತ್ತು ಎಂಬ ಮಾತುಗಳು ನಟಿಯ ಅಪಹರಣ ನಂತರ ಕೇಳಿಬರುತ್ತಿದೆ.
ಪಲ್ಸರ್ ಸುನಿ ಜೈಲಿನಿಂದ ಮಲಯಾಳಂ ಭಾಷೆಯಲ್ಲಿ ಪತ್ರ ಬರೆದು ಸಂದೇಶಕನ ಮೂಲಕ ಅದನ್ನು ದಿಲೀಪ್ ಗೆ ಕಳುಹಿಸಿ ಸುನಿಗೆ ಸಂದಾಯವಾಗಬೇಕಾದ ಹಣದ ಬಗ್ಗೆ ಅದರಲ್ಲಿ ಪ್ರಸ್ತಾಪಿಸಲಾಗಿದೆ. ಈ ಪತ್ರವನ್ನು ಬಹಳ ಕಷ್ಟಪಟ್ಟು ಕಳುಹಿಸುತ್ತಿದ್ದು, ತನ್ನ ಜೀವನ ಹಾಳಾದರೂ ಕೂಡ ದಿಲೀಪ್ ರನ್ನು ರಕ್ಷಿಸಲು ಪ್ರಯತ್ನಿಸುವುದಾಗಿ ಬರೆದಿದ್ದಾನೆ.
ಪತ್ರದಲ್ಲಿ ಹೀಗೆ ಬರೆಯಲಾಗಿದೆ: ನೀವು ಹೇಳಿದಷ್ಟು ಪೂರ್ಣ ಪ್ರಮಾಣದ ಹಣದ ಅವಶ್ಯಕತೆ ನನಗಿಲ್ಲ. ಇನ್ನು 5 ತಿಂಗಳಲ್ಲಿ ನನಗೆ ಪೂರ್ಣ ಮೊತ್ತ ನೀಡಿದರೆ ಸಾಕು. ನನಗೆ ನಿಮ್ಮ ಮೇಲಿರುವ ನಂಬಿಕೆ ಹೋಗಿಲ್ಲ. ನಾನು ಯಾಕೆ ಬಲಿಪಶುವಾಗಬೇಕು ಎಂದು ಹಲವರು ನನ್ನನ್ನು ಕೇಳಿದ್ದಾರೆ. ನಿಮ್ಮ ಹೆಸರು ಬಹಿರಂಗಪಡಿಸುವಂತೆ ನಿಮ್ಮ ಅನೇಕ ಶತ್ರುಗಳು ನನ್ನನ್ನು ಕೇಳಿದ್ದಾರೆ. ಆದರೆ ನಿಮ್ಮ ಚಿತ್ರಗಳಾದ ಸೌಂಡ್ ತೋಮಾ ನಿಂದ ಹಿಡಿದು ಜಾರ್ಜೆಟ್ಟನ್ ಪೂರಮ್ ವರೆಗೆ ನಾನು ಯಾವುದೇ ವಿಷಯಗಳನ್ನು ಬಹಿರಂಗಪಡಿಸಿಲ್ಲ. ನಾನು ನಾದಿರ್ಶನನ್ನು ನಂಬಬೇಕೆ? ನಾನು ನಾದಿರ್ಶನನ್ನು ಕರೆಯುತ್ತೇನೆ. ನನಗೆ ತೀರ್ಮಾನ ಗೊತ್ತಾಗಬೇಕು ಎಂದು ಪತ್ರದಲ್ಲಿ ಹೇಳಿದ್ದಾರೆ.ಮುಂದೆ ಏನು ಮಾಡಬೇಕೆಂದು ಪಲ್ಸರ್ ಸುನಿ ಪತ್ರದಲ್ಲಿ ನಟ ದಿಲೀಪ್ ನನ್ನು ಕೇಳಿದ್ದಾನೆ.
ಈ ಬಗ್ಗೆ ಇಂದು ಟಿವಿ ಚಾನೆಲ್ ವೊಂದಕ್ಕೆ ಪ್ರತಿಕ್ರಿಯಿಸಿದ ನಟ ದಿಲೀಪ್, ತಾವು ಅಮೆರಿಕಾ ಪ್ರವಾಸಕ್ಕೆ ಹೋಗುವ ಮುನ್ನ ಪೊಲೀಸರಿಗೆ ದೂರು ನೀಡಿದ್ದೆನು. ತಮ್ಮ ಸ್ನೇಹಿತ ನಾದಿರ್ಶನಿಗೆ ವಿಶ್ಣು ಎಂಬ ವ್ಯಕ್ತಿಯಿಂದ ಫೋನ್ ಬಂದಿತ್ತು. ಆತ ನಾನು ಪಲ್ಸರ್ ಸುನಿಯ ಜೈಲು ಸಂಗಾತಿ ಎಂದು ಪರಿಚಯಿಸಿಕೊಂಡನಂತೆ. ಆತ ನನಗೆ ಒಂದೂವರೆ ಕೋಟಿ ರೂಪಾಯಿ ಕೊಡಿ, ಇಲ್ಲದಿದ್ದರೆ ನಟ ದಿಲೀಪ್ ಹೆಸರನ್ನು ನಟಿಯ ಅಪಹರಣ ಕೇಸಿನಲ್ಲಿ ಬಹಿರಂಗಪಡಿಸುವುದಾಗಿ ಬೆದರಿಕೆಯೊಡ್ಡಿದ್ದನಂತೆ.
ವಿಷ್ಣು ಎಂಬ ಪಲ್ಸರ್ ಸುನಿಯ ಜೈಲು ಸಂಗಾತಿ ನನಗೆ ಹಣಕ್ಕಾಗಿ ಬೇಡಿಕೆಯೊಡ್ಡಿ ಬೆದರಿಕೆಯೊಡ್ಡಲಾರಂಭಿಸಿದ. ಕೆಲವು ಪಟ್ಟಭದ್ರ ಹಿತಾಸಕ್ತಿಗಳು ನನ್ನ ಸಿನಿಮಾ ವೃತ್ತಿ ಜೀವನವನ್ನು ಹಾಳು ಮಾಡಲು ಯತ್ನಿಸುತ್ತಿದ್ದಾರೆ ಎಂದು ದಿಲೀಪ್ ಆರೋಪಿಸಿದ್ದಾರೆ.
ದೂರವಾಣಿ ಸಂಭಾಷಣೆಯನ್ನು ದಾಖಲು ಮಾಡಿ ಪೊಲೀಸರಿಗೆ ನೀಡಿದ್ದೇವೆ ಎಂದು ನಾದಿರ್ಶ ಚಾನೆಲ್ ಗೆ ತಿಳಿಸಿದ್ದಾರೆ.ದೂರವಾಣಿ ಕರೆ ಮತ್ತು ಪತ್ರದ ನಿಖರತೆಯನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos