ದೇಶ

ಭಾರತದ ಅತಿಕ್ರಮ ಪ್ರವೇಶ ಆರೋಪಿಸಿ ಚೀನಾದಿಂದ ರಾಜತಾಂತ್ರಿಕ ದೂರು

Srinivas Rao BV
ನವದೆಹಲಿ: ಭಾರತದ ಗಡಿ ಪ್ರದೇಶದಲ್ಲಿ ಚೀನಾ ಮತ್ತೆ ಕ್ಯಾತೆ ತೆಗೆದಿದ್ದಷ್ಟೇ ಅಲ್ಲದೇ, ಈಗ ಭಾರತವೇ ತನ್ನ ಪ್ರದೇಶದಲ್ಲಿ ಅತಿಕ್ರಮ ಪ್ರವೇಶ ಮಾಡಿದೆ ಎಂದು ಆರೋಪಿಸಿದ್ದು ರಾಜತಾಂತ್ರಿಕ ದೂರು ದಾಖಲಿಸಿದೆ. 
ಚೀನಾದ ರಕ್ಷಣಾ ಹಾಗೂ ವಿದೇಶಾಂಗ ಇಲಾಖೆಗಳ ವಕ್ತಾರರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಸಿಕ್ಕೀಂ ರಾಜ್ಯದ ಮೂಲಕ ಭಾರತ ಚೀನಾದ ಪ್ರದೇಶವನ್ನು ಅತಿಕ್ರಮ ಪ್ರವೇಶ ಮಾಡಿದೆ. ಇದು ಈಗಾಗಲೇ ಭಾರತ-ಚೀನಾ ನಡುವೆ ಇರುವ ವಿವಾದವನ್ನು ಮತ್ತಷ್ಟು ಹೆಚ್ಚಿಸಲಿದೆ,  ಎಂದು ಹೇಳಿದ್ದಾರೆ. 
ಚೀನಾ ಪಡೆಗಳ ಎಂದಿನ ಚಟುವಟಿಕೆಗಳಿಗೆ ಭಾರತೀಯ ಸಿಬ್ಬಂದಿಗಳು ತಡೆಯೊಡ್ಡಿದ್ದಾರೆ. ಈ ಬಗ್ಗೆ ಭಾರತದ ರಾಯಭಾರಿ ಕಚೇರಿ ಅಧಿಕಾರಿಗಳಿಗೆ ದೂರು ನೀಡಿದ್ದೇವೆ, ನಮ್ಮ ಪ್ರಾದೇಶಿಕ ಸಾರ್ವಭೌಮತೆಯನ್ನು ಕಾಪಾಡಿಕೊಳ್ಳುವುದು ನಮ್ಮ ಹಕ್ಕು. ಭಾರತವೂ ಇದಕ್ಕೆ ಪೂರಕವಾಗಿ ಸ್ಪಂದಿಸಿ ಗಡಿ ಅತಿಕ್ರಮಣ ಮಾಡಿರುವ ಸಿಬ್ಬಂದಿಗಳನ್ನು ವಾಪಸ್ ಕರೆಸಿಕೊಳ್ಳಲಿದೆ ಎಂಬ ವಿಶ್ವಾಸವಿದೆ ಎಂದು ಚೀನಾದ ವಿದೇಶಾಂಗ ಅಧಿಕಾರಿ ತಿಳಿಸಿದ್ದಾರೆ.
ದ್ವಿಪಕ್ಷೀಯ ಸಂಬಂಧವನ್ನು ಅಭಿವೃದ್ಧಿಗೊಳಿಸಲು ಚೀನಾ ಬದ್ಧವಾಗಿದೆ. ಆದರೆ ಚೀನಾದ ಪ್ರಾದೇಶಿಕ ಸಮಗ್ರತೆಯನ್ನು ಭಾರತ ಗೌರವಿಸಬೇಕೆಂದು ಚೀನಾದ ವಿದೇಶಾಂಗ ಇಲಾಖೆ ವಕ್ತಾರರು ಹೇಳಿದ್ದಾರೆ.  ಸಿಕ್ಕಿಂನ ದೋಕಾ ಲಾ ಜನರಲ್ ವಲಯದ ಬಳಿ ಕಳೆದ ಹತ್ತು ದಿನಗಳಿಂದ ಚೀನಾ ಸೈನಿಕರು ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಂಡಿರುವ ಯಾತ್ರಾರ್ಥಿಗಳನ್ನು ತಡೆದಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಆದರೆ ಚೀನಾ ಭಾರತದ ವಿರುದ್ಧ ಆರೋಪ ಮಾಡಿದ್ದು, ಭಾರತ ಚೀನಾದ ಪ್ರದೇಶವನ್ನು ಅತಿಕ್ರಮ ಪ್ರವೇಶ ಮಾಡಿದೆ ಎಂದು ಹೇಳಿದೆ. 
SCROLL FOR NEXT