ಜಿಎಸ್'ಟಿ ಎಂದರೇನು? ಸೂಕ್ತ ಮಾಹಿತಿ ಕೊಡಿ: ಮೋದಿ ಸ್ವಕ್ಷೇತ್ರದಲ್ಲಿ ವರ್ತಕರ ಮುಷ್ಕರ
ವಾರಣಾಸಿ (ಉತ್ತರಪ್ರದೇಶ): ದೇಶದ ತೆರಿಗೆ ವ್ಯವಸ್ಥೆ ಇತಿಹಾಸದಲ್ಲಿಯೇ ಅತಿದೊಡ್ಡ ಸುಧಾರಣಾ ಕ್ರಮ ಎಂದೇ ಹೇಳಲಾಗುತ್ತಿರುವ ಜಿಎಸ್ ಟಿ ಜಾರಿಗೆ ತರಲು ಒಂದೆಡೆ ಆಡಳಿತಾರೂಢ ಕೇಂದ್ರದ ಎನ್ ಡಿಎ ಸರ್ಕಾರ ಸಕಲ ಸಿದ್ಧತೆಗಳನ್ನು ನಡೆಸಿದ್ದು, ಮತ್ತೊಂದೆಡೆ ಜಿಎಸ್ ಟಿ ಜಾರಿಗೆ ವಿರೋಧದಗಳ ಕೂಗು ಕೇಳಿ ಬರತೊಡಗಿವೆ.
ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಚಿವರಿಗಷ್ಟೇ ಆಲ್ಲದೆ, ಜನರಲ್ಲೂ ಸಾಕಷ್ಟು ಗೊಂದಲಗಳನ್ನು ಸೃಷ್ಟಿಸಿದ್ದು, ಸಾಮಾನ್ಯ ಜನರಿಗೆ ಈಗಲೂ ಅರ್ಥವಾಗದ ಯಕ್ಷ ಪ್ರಶ್ನೆಯೆಂಬಂತಹ ಬೆಳವಣಿಗೆಗಳು ಕಾಣತೊಡಗಿದೆ.
ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸ್ವಕ್ಷೇತ್ರ ವಾರಣಾಸಿಯಲ್ಲಿದೇ ಜಿಎಸ್ ಟಿ ಎಂದರೇನು? ಈ ಬಗ್ಗೆ ಸ್ಪಷ್ಟ ಹಾಗೂ ಸೂಕ್ತ ರೀತಿಯ ಮಾಹಿತಿಗಳನ್ನು ನೀಡಿದ ಎಂದು ಆಗ್ರಹಿಸಿ ವರ್ತಕರು ಮುಷ್ಕರಗಳನ್ನು ನಡೆಸುತ್ತಿದ್ದಾರೆ.
ಕೇಂದ್ರ ಸರ್ಕಾರ ಜಿಎಸ್ ಟಿಯನ್ನು ಸಾಧ್ಯವಾದಷ್ಟು ಸರಳಗೊಳಿಸಬೇಕು ಹಾಗೂ ಈ ಬಗ್ಗೆ ನಮಗೆ ಸೂಕ್ತ ರೀತಿಯ, ಅರ್ಥವಾಗುವಂತೆ ಮಾಹಿತಿ ನೀಡಬೇಕು. ಇದರಿಂದ ಅಧಿಕಾರಿಗಳು ನಮ್ಮನ್ನು ಮೂರ್ಖರನ್ನಾಗಿಸುವುದರಿಂದ ತಪ್ಪಿಸಬೇಕು. ಹೀಗಾಗಿ ಜಿಎಸ್ ಟಿ ಕುರಿತಂತೆ ಸೂಕ್ತ ರೀತಿಯ ಮಾಹಿತಿ ನೀಡಿರುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗುತ್ತಿದೆ. ಈಗಾಗಲೇ ಎಲ್ಲಾ ವರ್ತಕರು ನಮಗೆ ಬೆಂಬಲವನ್ನು ನೀಡಿದ್ದಾರೆ. ಈ ಮುಷ್ಕರ ನಿಮಗೆ ಫಲವನ್ನು ನೀಡಲಿದೆ ಎಂದು ನಾವು ನಂಬಿದ್ದೇವೆಂದು ಸ್ಥಳೀಯ ವರ್ತಕರು ಹೇಳಿದ್ದಾರೆ.
ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಜಿಎಸ್ ಟಿ ಕುರಿತಂತೆ ನಮಗೆ ಸರಿಯಾದ ಮಾಹಿತಿಯನ್ನು ನೀಡಬೇಕು. ಒಂದು ವೇಳೆ ಸರ್ಕಾರ ನಮಗೆ ಮಾಹಿತಿ ನೀಡದೇ ಹೋದಲ್ಲಿ ನಮ್ಮ ಪ್ರತಿಭಟನೆ ಮತ್ತಷ್ಟು ತೀವ್ರಗೊಳ್ಳುತ್ತದೆ ಎಂದು ತಿಳಿಸಿದ್ದಾರೆ.
ಕೇಂದ್ರ ಜಿಎಸ್ ಟಿ ಕುರಿತಂತೆ ಯಾವುದೇ ರೀತಿಯ ಗೊಂದಲಗಳು ಸೃಷ್ಟಿಯಾಗಬಾರದು, ತಮ್ಮ ಸಚಿವರುಗಳಿಗೆ ಹೆಚ್ಚಿನ ಮಾಹಿತಿ ನೀಡುವ ಸಲುವಾಗಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕೆಲ ದಿನಗಳ ಹಿಂದಷ್ಟೇ ಕಾರ್ಯಾಗಾರವೊಂದನ್ನು ನಡೆಸಿದ್ದರು. ಜಿಎಸ್ ಟಿ ಬಗ್ಗೆ ಗೊಂದಲದಲ್ಲಿರುವ ಜನರಿಗೆ ಅದರ ಬಗ್ಗೆ ತಿಳಿ ಹೇಳಬೇಕೆಂದೂ ಸಚಿವರಿಗೆ ಹೇಳಿದ್ದರು.
ಜಿಎಸ್ ಟಿ ಬಗ್ಗೆ ಸ್ವತಃ ಮುಖ್ಯಮಂತ್ರಿಗಳೇ ಪಾಠ ಮಾಡಿದ್ದರೂ, ಉತ್ತರಪ್ರದೇಶ ಸಮಾಜ ಕಲ್ಯಾಣ, ಬುಡಕಟ್ಟು ವ್ಯವಹಾರದ ಸಚಿವ ರಾಮ್ ಪತಿ ಶಾಸ್ತ್ರಿಯವರಿಗೆ ಜಿಎಸ್ ಟಿ ಪದದ ಫುಲ್ ಫಾರ್ಮ್ ಏನೆಂಬುದೇ ಗೊತ್ತಿಲ್ಲ. ಜಿಎಸ್ ಟಿ ಬಗ್ಗೆ ಪೂರ್ಣ ಪದ ಏನೆಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಶಾಸ್ತ್ರಿಯವರು ತಡಬಡಾಯಿಸಿದ್ದು, ಇದೀಗ ಸುದ್ದಿಗೆ ಗ್ರಾಸವಾಗಿದೆ.
ಪ್ರತಕರ್ತರು ಪ್ರಶ್ನೆ ಕೇಳುತ್ತಿದ್ದಂತೆಯೇ ಹಿಂದೆ ನಿಂತುಕೊಂಡಿದ್ದ ಕೆಲವರು ಸಚಿವರ ಸಹಾಯಕ್ಕೆ ಬಂದರಾದರೂ ಸಚಿವರಿಗೆ ಅದು ಅರ್ಥವಾಗಿಲ್ಲ. ನಂತರ ಸಾವರಿಸಿಕೊಂಡ ಸಚಿವ ಜಿಎಸ್ ಟಿ ಬಗ್ಗೆ ನನಗೆ ಗೊತ್ತಿದೆ. ಆದರೆ, ತಕ್ಷಣ ನೆನಪಿಗೆ ಬರುತ್ತಿಲ್ಲ ಎಂದಿದ್ದಾರೆ. ಜಿಎಸ್ ಟಿ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲು ಎಲ್ಲಾ ದಾಖಲೆಗಳನ್ನೂ ಓದುತ್ತಿರುವುದಾಗಿ ಹೇಳಿ ಪೇಚಿಗೆ ಸಿಲುಕಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos