ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನಾಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ ಲಷ್ಕರ್ ಉಗ್ರ ಸಂಘಟನೆಯ ಮುಖಂಡ ಬಷೀರ್ ಲಷ್ಕರಿ ಸೇರಿದಂತೆ ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿದೆ.
ಅನಂತ್ ನಾಗ್ ಜಿಲ್ಲೆಯ ದೈಲ್ಗಾಂ ಗ್ರಾಮದಲ್ಲಿ ಕಟ್ಟಡವೊಂದರಲ್ಲಿ ಅವಿತಿದ್ದ ಉಗ್ರರಿಗಾಗಿ ನಡೆಯುತ್ತಿರುವ ಕಾರ್ಯಾಚರಣೆ ಅಂತ್ಯಗೊಂಡಿದ್ದು, ಕಟ್ಟಡದಲ್ಲಿ ಅವಿತಿದ್ದ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಹತರಾದ ಉಗ್ರರ ಪೈಕಿ ಓರ್ವ ಉಗ್ರ ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆಯ ಮುಖಂಡ ಬಷೀರ್ ಲಷ್ಕರಿ ಹಾಗೂ ಮತ್ತೊಬ್ಬ ಉಗ್ರ ಅಝಾದ್ ಮಲಿಕ್ ಎಂದು ಗುರುತಿಸಲಾಗಿದೆ. ಅಂತೆಯೇ ಎನ್ ಕೌಂಟರ್ ನಲ್ಲಿ ಓರ್ವ ಮಹಿಳೆ ಸೇರಿ ಇಬ್ಬರು ನಾಗರಿಕರು ಸಹ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಉಗ್ರರ ವಿರುದ್ಧದ ಕಾರ್ಯಾಚರಣೆ ಅಂತ್ಯಗೊಂಡಿದೆ ಎಂದು ಪೊಲೀಸ್ ಮಹಾ ನಿರ್ದೇಶಕ ಎಸ್ ಪಿ ವೈದ್ ಅವರು ಹೇಳಿದ್ದಾರೆ.
ದೈಲ್ಗಾಂನ ಬಿರ್ನ್ಹಿ ಬರ್ಪೊರಾದಲ್ಲಿ ಉಗ್ರರು ಅಡಗಿ ಕುಳಿತಿರುವುದಾಗಿ ಖಚಿತ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಕಟ್ಟಡವನ್ನು ಸುತ್ತುವರೆದ ಭಾರತೀಯ ಸೇನಾಪಡೆಯ ಸೈನಿಕರು ಉಗ್ರರು ಯಾವುದೇ ಮಾರ್ಗದಲ್ಲಿ ತಪ್ಪಿಸಿಕೊಳ್ಳದಂತೆ ಎಚ್ಚರಿಕೆ ವಹಿಸಿದ್ದಾರೆ. ಈ ವೇಳೆ ಉಗ್ರರು ಸೈನಿಕರತ್ತ ಗುಂಡಿನ ಸುರಿಮಳೆಗರೆದ ಪರಿಣಾಮ ಓರ್ವ ಮಹಿಳೆ ಸಾವನ್ನಪ್ಪಿದ್ದರು. ಮೃತ ಮಹಿಳೆಯನ್ನು ಸ್ಥಳೀಯ ನಿವಾಸಿ ತಾಹಿರ್ ಬೇಗಂ ಎಂದು ಗುರುತಿಸಲಾಗಿದೆ. ಉಗ್ರರ ವಿರುದ್ಧ ಸೇನೆ ಕೂಡ ಪ್ರತಿದಾಳಿ ನಡೆಸಿದ್ದು, ಸತತ ಕಾರ್ಯಾಚರಣೆ ಬಳಿಕ ಇದೀಗ ಲಷ್ಕರ್ ಉಗ್ರ ಮುಖಂಡ ಬಷೀರ್ ಲಷ್ಕರಿ ಸೇರಿದಂತೆ ಇಬ್ಬರು ಉಗ್ರರನ್ನು ಸೈನಿಕರು ಹೊಡೆದುರುಳಿಸಿದ್ದಾರೆ.
ಕಳೆದ ಜೂನ್ 16ರಂದು ಇದೇ ಅನಂತ್ ನಾಗ್ ಜಿಲ್ಲೆಯಲ್ಲಿ ನಡೆದಿದ್ದ ಉಗ್ರ ದಾಳಿಯಲ್ಲಿ ಓರ್ವ ಠಾಣಾ ಅಧಿಕಾರಿ ಸೇರಿದಂತೆ ಐವರು ಪೊಲೀಸರು ಹುತಾತ್ಮರಾಗಿದ್ದರು. ಈ ದಾಳಿ ಹಿಂದೆ ಲಷ್ಕರ್ ಉಗ್ರ ಮುಖಂಡ ಬಷೀರ್ ಲಷ್ಕರಿ ಪಾತ್ರ ಇದೆ ಎಂದು ಹೇಳಲಾಗಿತ್ತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos