ದೇಶ

ನ್ಯಾಷನಲ್ ಹೆರಾಲ್ಡ್ ಪ್ರಕರಣ: ಮೂರು ವಾರಗಳಲ್ಲಿ ಉತ್ತರಿಸುವಂತೆ ಸೋನಿಯಾ ಮತ್ತು ರಾಹುಲ್ ಗಾಂಧಿಗೆ ಕೋರ್ಟ್ ಸೂಚನೆ

Sumana Upadhyaya
ನವದೆಹಲಿ:ನ್ಯಾಷನಲ್ ಹೆರಾಲ್ಡ್ ಕೇಸಿಗೆ ಸಂಬಂಧಪಟ್ಟಂತೆ ಪಕ್ಷದಿಂದ ಕೆಲವು ನಿರ್ದಿಷ್ಟ ದಾಖಲೆಗಳನ್ನು ಕೋರಿ ಅರ್ಜಿ ಸಲ್ಲಿಸಿದ ಬಿಜೆಪಿ ನಾಯಕ ಸುಬ್ರಹ್ಮಣ್ಯನ್ ಸ್ವಾಮಿ ಅವರ ಮನವಿಗೆ ಮೂರು ವಾರಗಳೊಳಗೆ ಪ್ರತಿಕ್ರಿಯಿಸುವಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತು ಇತರ ನಾಲ್ವರಿಗೆ ದೆಹಲಿ ಕೋರ್ಟ್ ಸೂಚಿಸಿದೆ.
ಸ್ವಾಮಿಯವರು ಸಲ್ಲಿಸಿದ ಅರ್ಜಿಯ ಪ್ರತಿ ಸಿಗಲಿಲ್ಲವೆಂದು ಸೋನಿಯಾ ಗಾಂಧಿ ಹಾಗೂ ಇತರರ ಪರ ವಕೀಲರು ಹೇಳಿದ್ದರಿಂದ ಇದೀಗ ಜುಲೈ 22ರೊಳಗೆ ಉತ್ತರಿಸುವಂತೆ ನಾಯಕರಿಗೆ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಲೊವ್ ಲೀನ್ ಕಾಲಾವಕಾಶ ನೀಡಿದ್ದಾರೆ.
ಅಲ್ಲದೆ ಸ್ವಾಮಿಯವರಿಗೆ ಅರ್ಜಿಯ ಪ್ರತಿ ನೀಡುವಂತೆ ಸೂಚಿಸಿದ್ದಾರೆ. ಸುಬ್ರಹ್ಮಣ್ಯ ಸ್ವಾಮಿ ಸೋನಿಯಾ ಗಾಂಧಿ ಹಾಗೂ ಇತರರ ವಿರುದ್ಧ ಖಾಸಗಿ ಅಪರಾಧ ದೂರು ಸಲ್ಲಿಸಿದ್ದರು.
ಸುಬ್ರಹ್ಮಣ್ಯ ಸ್ವಾಮಿ ತಮ್ಮ ದೂರಿನಲ್ಲಿ,ಸೋನಿಯಾ ಗಾಂಧಿ ಮತ್ತು ಇತರರು ಹಣವನ್ನು ದುರುಪಯೋಗಪಡಿಸಿ ಮೋಸ ಮಾಡಲು ಪಿತೂರಿ ನಡೆಸಿದ್ದರು ಎಂದು ದೂರಿದ್ದಾರೆ.
 ಆದರೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಎಐಸಿಸಿ ಸದಸ್ಯ ಮೋತಿಲಾಲ್ ವೊರಾ, ಆಸ್ಕರ್ ಫೆರ್ನಾಂಡಿಸ್, ಸುಮನ್ ದುಬೆ ಮತ್ತು ಸಾಮ್ ಪಿಟ್ರೊಡಾ ತಮ್ಮ ವಿರುದ್ಧದ ಆರೋಪವನ್ನು ನಿರಾಕರಿಸಿದ್ದಾರೆ.
SCROLL FOR NEXT