ಕೋಝಿಕ್ಕೋಡ್: ಕೇರಳದ ನಡಪುರಂ ಜಿಲ್ಲೆಯಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಚೇರಿ ಮೇಲೆ ಬಾಂಬ್ ದಾಳಿ ನಡೆಸಲಾಗಿದ್ದು, ನಾಲ್ವರಿಗೆ ಗಾಯವಾಗಿರುವ ಘಟನೆ ಗುರುವಾರ ನಡೆದಿದೆ.
ರಾತ್ರಿ 8.30ರ ಸುಮಾರಿಗೆ ಆರ್'ಎಸ್ಎಸ್ ಕಚೇರಿ ಮೇಲೆ ಬಾಂಬ್ ದಾಳಿ ನಡೆಸಲಾಗಿದ್ದು, ಘಟನೆಯಲ್ಲಿ ಬಾಬೂ, ವಿನೀಶ್. ಸುಧೀರ್ ಮತ್ತು ಸುನಿಲ್ ಎಂಬುವವರು ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.
ಬಾಬು ಮತ್ತು ವಿನೀಶ್ ಅವರ ಹೊಟ್ಟೆ, ಕಾಲುಗಳಿಗೆ ಗಂಭೀರವಾದ ಗಾಯಗಳಾಗಿದ್ದು, ಕೋಝಿಕ್ಕೋಡ್ ವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮತ್ತಿಬ್ಬರು ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ದಾಳಿ ಹಿಂದಿರುವ ಪ್ರಮುಖ ಕಾರಣಗಳು ಈ ವರೆಗೂ ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಹಿಂದೂಪರ ಸಂಘಟನೆಗಳ ಪ್ರತಿ ರೋಧದ ನಡುವೆಯೂ ಸಿಪಿಎಂ ಮಂಗಳೂರಿನಲ್ಲಿ ಆಯೋಜಿಸಿದ್ದ ಸೌಹಾರ್ದ ರ್ಯಾಲಿಯಲ್ಲಿ ಭಾಗಿಯಾಗಿದ್ದ ಹಿರಿಯ ಎಡಪಂಥೀಯ ನಾಯಕ ಮತ್ತು ಕೇರಳ ರಾಜ್ಯದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ತಲೆ ಕಡಿದವರಿಗೆ ರೂ.1 ಕೋಟಿ ಬಹುಮಾನ ನೀಡುವುದಾಗಿ ಈ ಹಿಂದೆ ಮಧ್ಯಪ್ರದೇಶ ಸ್ಥಳೀಯ ಆರ್'ಎಸ್ಎಸ್ ಕುಂದನ್ ಚಂದ್ರಾವತಿ ಅವರು ಹೇಳಿದ್ದರು. ಉಜ್ಜಯಿನಿಯ ಶಹೀದ್ ಪಾರ್ಕ್'ನಲ್ಲಿ ಅರ್'ಎಸ್ಎಸ್ ಹಮ್ಮಿಕೊಂಡಿದ್ದ ಸಭೆಯೊಂದರಲ್ಲಿ ಚಂದ್ರಾವತ್ ಅವರು ಈ ರೀತಿಯ ಹೇಳಿಕೆಯನ್ನು ನೀಡಿದ್ದರು. ಈ ಹೇಳಿಕೆಗೆ ಸಾಕಷ್ಟು ವಿರೋಧಗಳು ವ್ಯಕ್ತವಾಗತೊಡಗಿವೆ. ಹೇಳಿಕೆಯ ಬೆನ್ನಲ್ಲೇ ಕೇರಳದ ಆರ್'ಎಸ್ಎಸ್ ಕಚೇರಿ ಮೇಲೆ ಬಾಂಬ್ ದಾಳಿ ನಡೆಸಲಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos