ನವದೆಹಲಿ: ಈ ತಿಂಗಳು ಲಾಹೊರ್ ನಲ್ಲಿ ನಡೆಯಲಿರುವ ಶಾಶ್ವತ ಸಿಂಧೂ ಆಯೋಗದ ಸಭೆಯಲ್ಲಿ ಭಾರತ ಭಾಗವಹಿಸಲಿದೆ.ಸಿಂಧೂ ನದಿ ನೀರು ಹಂಚಿಕೆ ಒಪ್ಪಂದ ವಿವಾದವನ್ನು ಬಗೆಹರಿಸಲು ಭಾರತಕ್ಕೆ ಪಾಕಿಸ್ತಾನ ಆಹ್ವಾನ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಶಾಶ್ವತ ಸಿಂಧೂ ಆಯೋಗವು ದ್ವಿಪಕ್ಷೀಯ ಆಯೋಗವಾಗಿದ್ದು, ಭಾರತ ಮತ್ತು ಪಾಕಿಸ್ತಾನದ ಅಧಿಕಾರಿಗಳು ಅದರಲ್ಲಿದ್ದಾರೆ. ಸಿಂಧೂ ನದಿ ನೀರು ಒಪ್ಪಂದದ ಉದ್ದೇಶಗಳನ್ನು ನಿರ್ವಹಿಸಿ ಜಾರಿಗೊಳಿಸಲು ಈ ಆಯೋಗವನ್ನು ರಚಿಸಲಾಗಿದೆ.
ಕಳೆದ ವರ್ಷ ಜನವರಿಯಲ್ಲಿ ಪಠಾಣ್ ಕೋಟ್ ದಾಳಿಯ ನಂತರ ಎರಡು ಪರಮಾಣು ಶಕ್ತಿಯುತ ರಾಷ್ಟ್ರಗಳ ನಡುವಿನ ಸಂಬಂಧ ಮತ್ತಷ್ಟು ಹದಗೆಟ್ಟ ನಂತರ ಇದೀಗ ಈ ಬೆಳವಣಿಗೆಗಳಾಗಿದೆ.
ಸಿಂಧೂ ನದಿ ನೀರಿನ ಒಪ್ಪಂದದಡಿ ಕಿಶನ್ ಗಂಗಾ ಮತ್ತು ರಾಲ್ಟೆ ಯೋಜನೆಗಳ ಕುರಿತು ಈಗಿರುವ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಸಿದ್ಧರಿದ್ದೇವೆ ಎಂದು ಭಾರತ ಹೇಳಿದ್ದು, ಆದರೆ ಒಪ್ಪಂದವನ್ನು ಬದಲಾಯಿಸಲು ಅಥವಾ ಪರ್ಯಾಯ ವ್ಯವಸ್ಥೆವನ್ನು ಸ್ವೀಕರಿಸುವುದಿಲ್ಲ ಎಂದು ಪಾಕಿಸ್ತಾನ ದೃಢವಾಗಿ ಹೇಳಿದೆ. ಭಾರತ ನಿರ್ಮಿಸುತ್ತಿರುವ ಕಿಶನ್ ಗಂಗಾ, ರಾಟ್ಲೆ ಹೈಡ್ರೋ ಎಲೆಕ್ಟ್ರಿಕ್ ಘಟಕಗಳಿಗೆ ಪಾಕಿಸ್ತಾನ ಆಕ್ಷೇಪ ವ್ಯಕ್ತಪಡಿಸುತ್ತಿದೆ.
ಪಾಕಿಸ್ತಾನಕ್ಕೆ ಹರಿದು ಹೋಗುವ ನೀರನ್ನು ತಡೆಯಲಾಗುವುದು ಎಂದು ಪ್ರಧಾನ ಮಂತ್ರಿ ಕಳೆದ ತಿಂಗಳು ಬೆದರಿಕೆ ಹಾಕಿದ ನಂತರ ನೀರಿನ ವಿವಾದದ ಕುರಿತು ಆತಂಕ ಹೆಚ್ಚಾಗಿದೆ.
1960ರ ಸಿಂಧೂ ನದಿ ನೀರು ಒಪ್ಪಂದ ಕುರಿತ ವಿವಾದವನ್ನು ಬಗೆಹರಿಸಲು ಪರ್ಯಾಯ ಮಾರ್ಗವನ್ನು ಕಂಡುಹಿಡಿಯುವಂತೆ ವಿಶ್ವಬ್ಯಾಂಕ್ ಈ ಹಿಂದೆ ಭಾರತ ಮತ್ತು ಪಾಕಿಸ್ತಾನಕ್ಕೆ ಸೂಚಿಸಿತ್ತು.
1960ರಲ್ಲಿ ಭಾರತದ ಅಂದಿನ ಪ್ರಧಾನಿ ಜವಹರಲಾಲ್ ನೆಹರೂ ಮತ್ತು ಪಾಕಿಸ್ತಾನ ಅಧ್ಯಕ್ಷ ಅಯೂಬ್ ಖಾನ್ ಮಾಡಿಕೊಂಡ ಒಪ್ಪಂದದ ಪ್ರಕಾರ, ಪೂರ್ವ ಭಾಗದಲ್ಲಿರುವ ಮೂರು ನದಿಗಳಾದ ಸಿಂಧೂ ಜಲಾನಯನ, ಬಿಯಾಸ್, ರವಿ ಮೇಲೆ ಭಾರತಕ್ಕೆ ಹತೋಟಿಯಿದ್ದರೆ ಪಶ್ಚಿಮ ಪ್ರಾಂತ್ಯಗಳಲ್ಲಿರುವ ಸಿಂಧೂ, ಚೆನಾಬ್ ಮತ್ತು ಝೀಲಂ ಮೇಲೆ ಪಾಕಿಸ್ತಾನ ನಿಯಂತ್ರಣವನ್ನು ಹೊಂದಿರುತ್ತದೆ.
ಒಪ್ಪಂದ ಮಾಡಿಕೊಂಡ ಪ್ರಕಾರ, ಸಿಂಧೂ ನದಿಯ ಒಟ್ಟು ನೀರಿನಲ್ಲಿ ಶೇಕಡಾ 20 ಭಾಗವನ್ನು ಮಾತ್ರ ಭಾರತ ಉಪಯೋಗಿಸಬಹುದಾಗಿದೆ.