ನವದೆಹಲಿ: ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸಂಗೀತ ರಿಯಾಲಿಟಿ ಷೋನಲ್ಲಿ ಹಿಂದೂ ಭಕ್ತಿ ಗೀತೆ ಹಾಡಿದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಸುಹಾನಾ ಸಯೀದ್ ಗೆ ಸಮುದಾಯದ ಮಂದಿಯಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಚಾನೆಲ್ ನಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋನ ಸ್ಪರ್ಧಾಳುವಾಗಿ ಸುಹಾನಾ ಸಯೀದ್ ಭಾಗವಹಿಸಿದ್ದು ಕಳೆದ ವಾರ ಹಿಂದೂ ಭಕ್ತಿಗೀತೆಯನ್ನು ಹಾಡಿದ್ದರು. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮಂದಿ ವಿರೋಧ ವ್ಯಕ್ತಪಡಿಸಿದ್ದಾರೆ.
ಮಂಗಳೂರು ಮುಸ್ಲಿಮ್ಸ್ ಫೇಸ್ ಬುಕ್ ಪುಟದಲ್ಲಿ, ''ಸುಹಾನಾ ನೀನು ಪುರುಷರ ಎದುರು ಹಾಡಿ ಮುಸ್ಲಿಂ ಸಮುದಾಯಕ್ಕೆ ಕಳಂಕ ತಂದಿದ್ದೀಯಾ. ನೀನು ಸಾಧನೆ ಮಾಡಿದ್ದಿ ಎಂದು ಭಾವಿಸಬೇಡ, ಖುರಾನ್ ನ್ನು 6 ತಿಂಗಳಲ್ಲಿ ಪಠಿಸಲು ಕಲಿತವರು ಹೆಚ್ಚು ಸಾಧನೆ ಮಾಡಿದ್ದಾರೆ. ನಿನ್ನ ಪೋಷಕರು ನಿನ್ನ ಸೌಂದರ್ಯವನ್ನು ಬೇರೆ ಪುರುಷರಿಗೆ ತೋರಿಸಲು ನಿನಗೆ ಪ್ರೋತ್ಸಾಹ ನೀಡುತ್ತಾರೆ. ನಿನ್ನಿಂದಾಗಿ ಅವರು ಸ್ವರ್ಗಕ್ಕೆ ಹೋಗುವುದಿಲ್ಲ. ನೀನು ಧರಿಸಿರುವ ಬುರ್ಖಾವನ್ನು ತೆಗೆ. ಅದಕ್ಕೆ ನೀನು ಗೌರವ ತೋರಿಸುವುದಿಲ್ಲ'' ಎಂದು ಬೈದು ಬರೆಯಲಾಗಿದೆ.
ಬೇರೆ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಸುಹಾನಾಗೆ ವ್ಯಾಪಕ ಟೀಕೆ ಬಂದಿದೆ. ಆದರೆ ಸಮಾಜದ ಇನ್ನೊಂದು ವರ್ಗದಿಂದ ಮತ್ತು ಕಾರ್ಯಕ್ರಮದ ತೀರ್ಪುಗಾರರಿಂದ ಸುಹಾನಾ ಹಾಡಿಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದ್ದು, ನೀವು ಸಮಾಜದಲ್ಲಿ ಏಕತೆಯ ಪ್ರತೀಕವಾಗಬೇಕೆಂದು ಹೇಳಿದ್ದಾರೆ. ಸುಹಾನಾ ಬೆಂಬಲಕ್ಕೆ ಅನೇಕರು ನಿಂತಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos