ನವದೆಹಲಿ: ವಿಶ್ವವಿದ್ಯಾಲಯದ ಉಪ ಕುಲಪತಿಗಳಿಗೆ ಬೆದರಿಕೆ ಹಾಕಿದ ಕಾರಣ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ವಿರುದ್ಧ ದೆಹಲಿ ಪೊಲೀಸರು ಗುರುವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿದ್ಯಾರ್ಥಿಗಳು ಬೆದರಿಕೆ ಹಾಕಿರುವ ಕುರಿತಂತೆ ಜೆಎನ್ ಯು ವಿಶ್ವವಿದ್ಯಾಲಯದ ಉಪ ಕುಲಪತಿಗಳು ಮಾರ್ಚ್ 5ರಂದೇ ದೂರು ನೀಡಿದ್ದರು. ಆದರೆ, ದೆಹಲಿ ಪೊಲೀಸರು ವಿಚಾರಣೆ ಬಳಿಕ ಇಂದು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆಂದು ತಿಳಿದುಬಂದಿದೆ.
ಫೆ.27 ರಂದು ನಡೆದಿದ್ದ ಪ್ರತಿಭಟನೆ ಬಳಿಕ ಉಪ ಕುಲಪತಿಗಳ ಕಚೇರಿ ಬಳಿ ಬಂದ ವಿದ್ಯಾರ್ಥಿಗಳು ಉಪ ಕುಲಪತಿಗಳನ್ನು ಭೇಟಿ ಮಾಡಬೇಕೆಂದು ಆಗ್ರಹಿಸಿದ್ದಾರೆ. ಉಪ ಕುಲಪತಿಗಳ ಆರೋಗ್ಯ ಸರಿಯಲ್ಲದ ಕಾರಣ ಭೇಟಿಗೆ ನಿರಾಕರಿಸಲಾಗಿದೆ. ಉಪ ಕುಲಪತಿಗಳು ಅನಾರೋಗ್ಯ ಪೀಡಿತರಾಗಿದ್ದರಿಂದ ವೈದ್ಯರನ್ನು ಕರೆಸಲಾಗಿದೆ. ಆದರೆ, ಈ ವೇಳೆ ವಿದ್ಯಾರ್ಥಿಗಳು ವೈದ್ಯರು ಒಳಹೋಗದಂತೆ ತಡೆಹಿಡಿದ್ದಾರೆ. ಉಪ ಕುಲಪತಿಗಳು ಭೇಟಿ ಮಾಡಲಿಲ್ಲವೆಂದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿದ್ಯಾರ್ಥಿನಿಯೊಬ್ಬಳು ಬೆದರಿಕೆ ಹಾಕಿದ್ದಾಳೆ. ಅಲ್ಲದೆ, ಕೆಲ ವಿದ್ಯಾರ್ಥಿಗಳು ಉಪಕುಲಪತಿಗಳೊಂದಿಗೆ ಕೆಟ್ಟದಾಗಿ ವರ್ತಿಸಿದ್ದಾರೆಂದು ದೂರಿನಲ್ಲಿ ಹೇಳಿಕೊಳ್ಲಲಾಗಿದೆ.
ಪ್ರಸ್ತುತ ಐಪಿಸಿ ಕಲಂ 341/342/504/34 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.