ಲಖನೌ: ನನ್ನ ವಿರುದ್ಧ ಪಿತೂರಿ ನಡೆಸಲಾಗಿದ್ದು, ಪ್ರಕರಣ ಸಂಬಂಧ ಮಂಪರು ಪರೀಕ್ಷೆಗೆ ನಾನು ಸಿದ್ಧನಿದ್ದೇನೆಂದು ಅತ್ಯಾಚಾರ ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿರುವ ಗಾಯತ್ರಿ ಪ್ರಜಾಪತಿ ಬುಧವಾರ ಹೇಳಿದ್ದಾರೆ.
ಮಹಿಳೆಯೊಬ್ಬರ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಆಕೆಯ ಮಗಳ ಮೇಲೆ ಅತ್ಯಾಚಾರದ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಗಾಯತ್ರಿ ಪ್ರಜಾಪತಿ ಮತ್ತು ಇತರ ಆರು ಮಂದಿಯ ವಿರುದ್ಧ ಕಳೆದ ಫೆ.17ರಂದು ಸುಪ್ರೀಂಕೋರ್ಟ್ ಅಣತಿಯ ಮೇರೆಗೆ ಎಫ್ಐಆರ್ ದಾಖಲಿಸಲಾಗಿತ್ತು.
ಪ್ರಕರಣ ಬೆಳಕಿಗೆ ಬಂದು ಹಲವು ತಿಂಗಳುಗಳೇ ಕಳೆದರೂ ಆರೋಪಿ ಗಾಯತ್ರಿ ಪ್ರಜಾಪತಿಯವರನ್ನು ಬಂಧನಕ್ಕೊಳಪಡಿಸಲು ಸಾಧ್ಯವಾಗಿರಲಿಲ್ಲ. ಇಂದು ಬೆಳಿಗ್ಗೆ ಗಾಯತ್ರಿ ಪ್ರಜಾಪತಿಯವರನ್ನು ಬಂಧನಕ್ಕೊಳಪಡಿಸಲಾಗಿತ್ತು. ಬಂಧನಕ್ಕೊಳಪಡಿಸಿದ ಬಳಿಕ ಪ್ರಜಾಪತಿಯವರನ್ನು ಪೋಸ್ಕೋ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ ಪ್ರಜಾಪತಿಯವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೊಳಪಡಿಸಿದೆ. ಇದಲ್ಲದೆ, ಪ್ರಜಾಪತಿಗೆ ತಲೆಮರೆಸಿಕೊಳ್ಳಲು ಸಹಾಯ ಮಾಡಿದ್ದ ಮೂವರು ಸಹವರ್ತಿಗಳನ್ನೂ ಪೊಲೀಸರು ಬಂಧಿಸಿದ್ದು, ಪ್ರಕರಣ ಬೇಧಿಸುವಲ್ಲಿ ಮಹತ್ವದ ಸುಳಿವು ದೊರೆತಿದೆ ಎಂದು ಮೂಲಗಳು ತಿಳಿಸಿವೆ.
ನ್ಯಾಯಾಂಗ ಬಂಧನಕ್ಕೊಳಪಡಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿರುವ ಆರೋಪಿ ಗಾಯತ್ರಿ ಪ್ರಜಾಪತಿಯವರು, ನಾನು ನಿರಪರಾಧಿ, ನನ್ನ ವಿರುದ್ಧ ಪಿತೂರಿ ನಡೆಸಲಾಗಿದೆ. ಪ್ರಕರಣ ಸಂಬಂಧ ಮಂಪರು ಪರೀಕ್ಷೆಗೆ ನಾನು ಸಿದ್ಧನಿದ್ದೇನೆ. ಆರೋಪ ಮಾಡುತ್ತಿರುವ ಮಹಿಳೆಯನ್ನೂ ಮಂಪರು ಪರೀಕ್ಷೆಗೊಳಪಡಿಸಿ. ದೇಶದ ನ್ಯಾಯಾಂಗ ವ್ಯವಸ್ಥೆ ಮೇಲೆ ನನಗೆ ಸಂಪೂರ್ಣ ನಂಬಿಕೆಯಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos