ಗ್ವಾಲಿಯರ್: ದೇಶದ ಗಡಿಭಾಗಗಳನ್ನು ಮುಚ್ಚಲಾಗುವುದು ಎಂದು ಕೇಂದ್ರ ಗೃಹ ಖಾತೆ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಮಧ್ಯ ಪ್ರದೇಶದ ಗ್ವಾಲಿಯರ್ ಜಿಲ್ಲೆಯ ಟೆಕನ್ ಪುರ್ ಎಂಬಲ್ಲಿ ಗಡಿ ಭದ್ರತಾ ಪಡೆಯ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶದ ಗಡಿಭಾಗಗಳನ್ನು ಸರಿಯಾಗಿ ರಕ್ಷಿಸುವಲ್ಲಿ ಗಡಿ ಭದ್ರತಾ ಪಡೆ ತನ್ನ ಜವಾಬ್ದಾರಿಗಳನ್ನು ನಿರ್ವಹಿಸುತ್ತದೆ. ಇದರಿಂದಾಗಿ ಬಿಎಸ್ಎಫ್ ಬಗ್ಗೆ ದೇಶದ ಜನರ ನಂಬಿಕೆ ಮತ್ತು ವಿಶ್ವಾಸ ಜಾಸ್ತಿಯಾಗಿದೆ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಗಡಿಗಳನ್ನು ಮುಚ್ಚಲಾಗುವುದು. ಎಲ್ಲೆಲ್ಲಿ ಸಾಧ್ಯವಿದೆಯೋ ಅಲ್ಲೆಲ್ಲಾ ಬೇಲಿ ಹಾಕಲಾಗುವುದು. ಸಾಧ್ಯವಾಗದ ಕಡೆ ತಂತ್ರಜ್ಞಾನವನ್ನು ಅಳವಡಿಸಲಾಗುವುದು ಎಂದು ಹೇಳಿದರು.
ಮಾವೋವಾದಿಗಳ ಉಪಟಳದ ಬಗ್ಗೆ ಮಾತನಾಡಿದ ಗೃಹ ಸಚಿವರು, ಮಾವೋವಾದಿಗಳ ಸಮಸ್ಯೆ ಕಳೆದ 2-3 ವರ್ಷಗಳಲ್ಲಿ ಶೇಕಡಾ 50ರಿಂದ 55ರಷ್ಟು ಕಡಿಮೆಯಾಗಿದೆ. ಈ ಮೊದಲು 135 ಜಿಲ್ಲೆಗಳು ಮಾವೋವಾದಿ ಪೀಡಿತವಾಗಿದ್ದವು.ಅದು ಇಂದು 35ಕ್ಕೆ ಇಳಿಕೆಯಾಗಿದೆ ಎಂದರು.
ಆಯಾ ರಾಜ್ಯ ಸರ್ಕಾರಗಳು ಮಾವೋವಾದಿಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದು, ಕೇಂದ್ರ ಸರ್ಕಾರ ಇದಕ್ಕೆ ಸಂಪೂರ್ಣ ಸಹಕಾರ ನೀಡುತ್ತದೆ ಎಂದು ರಾಜನಾಥ್ ಸಿಂಗ್ ತಿಳಿಸಿದರು.