ನವದೆಹಲಿ: ಗೋವುಗಳಿಗೆ ಅಗೌರವ ತೋರುವವರು ಹಾಗೂ ಗೋವುಗಳನ್ನು ಹತ್ಯೆ ಮಾಡುವವರ ಕೈ ಹಾಗೂ ಕಾಲುಗಳನ್ನು ಮುರಿದು ಹಾಕುತ್ತೇನೆಂದು ಬಿಜೆಪಿ ಶಾಸಕ ವಿಕ್ರಮ್ ಸೈನಿ ಅವರು ಭಾನುವಾರ ಹೇಳಿದ್ದಾರೆ.
ಖಾಸಗಿ ಸಮಾರಂಭವೊಂದರಲ್ಲಿ ಮಾತನಾಡಿರುವ ಅವರು, ವಂದೇ ಮಾತರಂ ಹಾಗೂ ದೇಶದ ಪರ ಘೋಷಣೆ ಕೂಗುವುದಕ್ಕೆ ನಿರಾಕರಿಸುವವರು, ಗೋವನ್ನು ಮಾತೆಯನ್ನಾಗಿ ಸ್ವೀಕರಿಸದವರು ಹಾಗೂ ಗೋ ಹತ್ಯೆ ಮಾಡುವವರ ಕೈ, ಕಾಲುಗಳನ್ನು ಕತ್ತರಿಸುತ್ತೇವೆ. ಈ ಕುರಿತು ನಾನು ಪ್ರಮಾಣವನ್ನು ಮಾಡುತ್ತೇನೆಂದು ಹೇಳಿದ್ದಾರೆ.
ಗೋ ರಕ್ಷಣೆಗಾಗಿಯೇ ನಮ್ಮ ತಂಡವೊಂದು ಸದಾಕಾಲ ಸಿದ್ಧವಿದ್ದು, ಭಾರತದ ರಕ್ಷಣೆಗೂ ಸದಾಕಾಲ ಸಿದ್ಧವಿರುತ್ತದೆ. ಪಾಕಿಸ್ತಾನವಾಗಲೀ ಅಥವಾ ಚೀನಾ ದೇಶವಾಗಲಿ ನಮ್ಮ ಮೇಲೆ ಯುದ್ಧಕ್ಕೆ ಬಂದಿದ್ದೇ ಆದರೆ, ನಮ್ಮ ತಂಡದವರು ವೇತನವಿಲ್ಲದೆಯೇ ಗಡಿಯಲ್ಲಿ ನಿಂತು ಯುದ್ಧ ಮಾಡಲು ಸಿದ್ಧರಿದ್ದಾರೆಂದು ತಿಳಿಸಿದ್ದಾರೆ.
ಸೈನಿಯವರು ಈ ರೀತಿಯ ಹೇಳಿಕೆ ನೀಡುತ್ತಿದ್ದಂತೆಯೇ ಸ್ಥಲದಲ್ಲಿದ್ದ ಜನರು ಚಪ್ಪಾಳೆ ಹೊಡೆಯುವ ಮೂಲಕ ಸೈನಿಯವರಿಗೆ ಬೆಂಬಲ ನೀಡಿದ್ದಾರೆ. ಆದರೆ, ವೇದಿಕೆಯಲ್ಲಿದ್ದ ಕೆಲ ಬಿಜೆಪಿ ಸದಸ್ಯರು ಹೇಳಿಕೆ ನೀಡುತ್ತಿದ್ದ ಸೈನಿಯವರನ್ನು ತಡೆದಿದ್ದಾರೆಂದು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ.
ಸೈನಿ ವಿವಾದಾತ್ಮಕ ಹೇಳಿಕೆ ನೀಡುತ್ತಿರುವುದು ಇದು ಮೊದಲೇನಲ್ಲ. ಮುಜಾಫರ್ ನಗರ ಗಲಭೆ ಸಂದರ್ಭದಲ್ಲಿ ಕೂಡ ಇಂಥಹದ್ದೇ ಅಕ್ಷೇಪಾರ್ಹ ಹೇಳಿಕೆಯೊಂದನ್ನು ನೀಡಿದ್ದರು. ಹೇಳಿಕೆ ಸಂಬಂಧ ಸೈನಿಯವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos