ದೇಶ

ಭಾರತೀಯ ಯೋಧರ ಶಿರಚ್ಛೇಧ: 'ಪರಿಣಾಮಕಾರಿ ಸಾಕ್ಷಿ' ಕೇಳಿದ ಪಾಪಿಸ್ತಾನ!

Srinivas Rao BV
ನವದೆಹಲಿ: ತನ್ನ ಯೋಧರು ಗಡಿನಿಯಂತ್ರಣ ರೇಖೆಯೊಳಗೆ ನುಗ್ಗಿ ಭಾರತೀಯ ಯೋಧರ ಶಿರಚ್ಛೇಧ ಮಾಡಿ, ಅಂಗಾಂಗಗಳನ್ನು ಕತ್ತರಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಣಾಮಕಾರಿ( ಕ್ರಮ ಕೈಗೊಳ್ಳಬಹುದಾದಂತಹ) ಸಾಕ್ಷಿ ಒದಗಿಸುವಂತೆ ಪಾಪಿಸ್ತಾನ ಭಾರತಕ್ಕೆ ಹೇಳಿದೆ. 
ಘಟನೆ ನಡೆದ ಬಳಿಕ ಗಡಿಯಲ್ಲಿ ಉಂಟಾಗಿದ್ದ ಉದ್ವಿಗ್ನತೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಉಭಯ ರಾಷ್ಟ್ರಗಳ ಸೇನಾ ಕಾರ್ಯಾಚರಣೆಗಳ ಪ್ರಧಾನ ನಿರ್ದೇಶಕ (ಡಿಜಿಎಂಒ) ರ ನಡುವೆ ನಡೆದ ಹಾಟ್ ಲೈನ್ ಮಾತುಕತೆ ವೇಳೆಯಲ್ಲಿ ಭಾರತದ ಆರೋಪವನ್ನು ಪಾಕಿಸ್ತಾನದ ಡಿಜಿಎಂಒ ನಿರಾಕರಿಸಿದ್ದು, ತನ್ನ ಯೋಧರಿಂದ ಭಾರತೀಯ ಯೋಧರ ಶಿರಚ್ಛೇಧ ನಡೆದಿರುವ ಪ್ರಕರಣಕ್ಕೆ ಪರಿಣಾಮ ಸಾಕ್ಷಿ ಒದಗಿಸುವಂತೆ ಕೇಳಿದೆ. 
"ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮಾಡಿ, ಯೋಧರ ಶಿರಚ್ಛೇಧ ಮಾಡಿ ಅಂಗಾಂಗಗಳನ್ನು ಕತ್ತರಿಸಿರುವ ಆರೋಪವನ್ನು ನಿರಾಕರಿಸಿದೆ" ಎಂದು ಭಾರತೀಯ ಸೇನೆ ಹೇಳಿಕೆ ಬಿಡುಗಡೆ ಮಾಡಿದೆ. ಭಾರತದ ಡಿಜಿಎಂಒ ಲೆಫ್ಟಿನೆಂಟ್ ಜನರಲ್ ಎಕೆ ಭಟ್ ಅವರೊಂದಿಗೆ ಮಾತನಾಡಿರುವ ಪಾಕಿಸ್ತಾನ ಡಿಜಿಎಂಒ ಸಾಹಿರ್ ಶಂಷಾದ್ ಮಿರ್ಜಾ, "ಪಾಕಿಸ್ತಾನ ಕದನ ವಿರಾಮವನ್ನೂ ಉಲ್ಲಂಘಿಸಿಲ್ಲ, ಭಾರತ ಹೇಳುತ್ತಿರುವ ಪ್ರದೇಶದಲ್ಲಿ ಪಾಕಿಸ್ತಾನದ ಸೇನಾ ಪಡೆ ಎಲ್ಒಸಿಯನ್ನೂ ದಾಟಿಲ್ಲ ಎಂದಿದ್ದಾರೆ. 
ಪಾಕಿಸ್ತಾನ ವೃತ್ತಿಪರ ಸೇನೆಯಾಗಿದ್ದು ನಡವಳಿಕೆಯ ಮಾನದಂಡಗಳನ್ನು ಪಾಲಿಸುತ್ತದೆ. ಕಾಶ್ಮೀರ ಕಣಿವೆಯಲ್ಲಿನ ಪರಿಸ್ಥಿತಿಯಿಂದ ವಿಶ್ವದ ಗಮನವನ್ನು ಬೇರೆಡೆಗೆ ಸೆಳೆಯಲು ಭಾರತ ಪಾಕಿಸ್ತಾನದ ವಿರುದ್ಧ ಯೋಧರ ಶಿರಚ್ಛೇಧ ಆರೋಪ ಮಾಡುತ್ತಿದೆ ಎಂದಿದ್ದಾರೆ. ಅಷ್ಟೇ ಅಲ್ಲದೇ ಭಾರತೀಯ ಸೇನೆ ಹೇಳುತ್ತಿರುವಂತೆ ಪಾಕ್ ಯೋಧರು ಭಾರತೀಯ ಯೋಧರ ಶಿರಚ್ಛೇಧ ಮಾಡಿದ್ದರೆ ಅದಕ್ಕೆ ಪರಿಣಾಮಕಾರಿಯಾದ ಸಾಕ್ಷಿ ಒದಗಿಸುವಂತೆ ಮಿರ್ಜಾ ಲೆಫ್ಟಿನೆಂಟ್ ಜನರಲ್ ಎಕೆ ಭಟ್ ಅವರಲ್ಲಿ ಹೇಳಿದ್ದಾರೆ ಎಂದು ಭಾರತೀಯ ಸೇನೆ ಹೇಳಿಕೆಯಲ್ಲಿ ತಿಳಿಸಿದೆ. 
SCROLL FOR NEXT