ಉಜ್ಜೈನಿ: ಹಸುವಿನ ಬಾಲ ಕತ್ತರಿಸಿದ್ದಾರೆಂದು ವ್ಯಕ್ತಿಯೊಬ್ಬರ ಮೇಲೆ ಸ್ವಯಂ ಘೋಷಿತ ಗೋರಕ್ಷಕರು ಹಲ್ಲೆ ನಡೆಸಿರುವ ಘಟನೆ ಉಜ್ಜೈನಿಯಲ್ಲಿ ನಡೆದಿದ್ದು ಹಲ್ಲೆ ನಡೆಸಿದ ಗುಂಪಿನಲ್ಲಿದ್ದವರ ಪೈಕಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಉಜ್ಜೈನಿಯ ದೇವಾಲಯದ ಬಳಿ ಈ ಘಟನೆ ನಡೆದಿದ್ದು ಸ್ವಯಂ ಘೋಷಿತ ಗೋರಕ್ಷಕರು ಹಲ್ಲೆ ನಡೆಸಿರುವುದು ವೈರಲ್ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯನ್ನು ಬೆಲ್ಟ್ ನಲ್ಲಿ ಥಳಿಸುತ್ತಿರುವ ದೃಶ್ಯಾವಳಿಗಳು ಸೆರೆಯಾಗಿವೆ. ಆದರೆ ಪೊಲೀಸ್ ಅಧಿಕಾರಿ ಒಪಿ ಮಿಶ್ರಾ ಪ್ರಕಾರ ಹಣದ ವಿಚಾರಕ್ಕೆ ವಿವಾದ ಉಂಟಾಗಿದ್ದು, ವ್ಯಕ್ತಿಯನ್ನು ಥಳಿಸಲಾಗಿದೆ ಎಂದು ತಿಳಿದುಬಂದಿದೆ.
ಥಳಿತಕ್ಕೊಳಗಾದ ವ್ಯಕ್ತಿಯಿಂದ ದೂರು ದಾಖಲಿಸಿಕೊಂಡಿರುವ ಪೊಲೀಸರು ಚೇತನ್ ಸಂಖಲ್, ವಿಕಾಸ್, ನೀಲೇಶ್ ಹಾಗೂ ಶುಭಂ ಎಂಬುವವರ ವಿರುದ್ಧ ಐಪಿಸಿ ಸೆಕ್ಷನ್ ಪ್ರಕಾರ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ. ಚೇತನ್ ಮತ್ತು ವಿಕಾಸ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು ಉಳಿದವರು ಕಾಣೆಯಾಗಿದ್ದಾರೆ ಎಂದು ಒಪಿ ಮಿಶ್ರಾ ಮಾಹಿತಿ ನೀಡಿದ್ದಾರೆ.