ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತ್ವತೃದ ಎನ್ ಡಿಎ ಸರ್ಕಾರ 3 ವರ್ಷದ ಸಂಭ್ರಮಾಚರಣೆಯನ್ನು ಮಾಡುತ್ತಿದ್ದು, ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಬಿಜೆಪಿ ವಿರುದ್ಧ ಮಂಗಳವಾರ ಕಿಡಿಕಾರಿದ್ದಾರೆ.
ಕೇಂದ್ರದ ಸರ್ಕಾರ ವಿರುದ್ಧ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಕಿಡಿಕಾರಿರುವ ಅವರು, ಸರ್ಕಾರ ನಿಜಕ್ಕೂ ಯಾವುದರ ಕುರಿತಂತೆ ಸಂಭ್ರಮವನ್ನು ಆಚರಿಸುತ್ತಿದೆ? ದೇಶದಲ್ಲಿ ಇಂದು ಪರಿಸ್ಥಿತಿ ಕುಸಿದಿದೆ. ಯುವಕರು ನಿರುದ್ಯೋಗದಿಂದ ಬಳಲುತ್ತಿದ್ದಾರೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ, ಗಡಿಯಲ್ಲಿ ದೇಶಕ್ಕಾಗಿ ನಮ್ಮ ಯೋಧರು ಹುತಾತ್ಮರಾಗುತ್ತಿದ್ದಾರೆ. ಸರ್ಕಾರ ಯಾವುದಕ್ಕಾಗಿ ಸಂಭ್ರಮವನ್ನಾಚರಿಸುತ್ತಿದೆ ಎಂದು ಪ್ರಶ್ನಿಸಿದ್ದಾರೆ.
ಇನ್ನು ಕೆಲವೇ ದಿನಗಳಲ್ಲಿ ಕೇಂದ್ರ ಮೋದಿ ಸರ್ಕಾರಕ್ಕೆ 3 ವರ್ಷ ತುಂಬಲಿದೆ. ಈ ಹಿನ್ನಲೆಯಲ್ಲಿ 15 ದಿನಗಳ ಕಾಲ ಸಂಭ್ರವನ್ನು ಆಚರಿಸಲು ಬಿಜೆಪಿ ಯೋಜನೆ ರೂಪಿಸಿದೆ. ಮೇ.26 ರಿಂದ ಜೂ.15ರವರೆಗೂ ಸಂಭ್ರಮಾಚರಣೆ ನಡೆಯಲಿದೆ. ಮೇ.25 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು 'ನವ ಭಾರತ ಅಭಿಯಾನ'ಕ್ಕೆ ಚಾಲನೆ ನೀಡಲಿದ್ದಾರೆ.