ದೇಶ

ಕಲ್ಲಿದ್ದಲು ಹಗರಣ: ಎಚ್.ಸಿ. ಗುಪ್ತಾ ಸೇರಿ ಮೂವರು ಅಧಿಕಾರಿಗಳಿಗೆ 2 ವರ್ಷ ಜೈಲು

Lingaraj Badiger
ನವದೆಹಲಿ: ಬಹುಕೋಟಿ ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಕಲ್ಲಿದ್ದಲು ಇಲಾಖೆ ಮಾಜಿ ಕಾರ್ಯದರ್ಶಿ ಎಚ್‌.ಸಿ.ಗುಪ್ತಾ ಹಾಗೂ ಇತರೆ ಇಬ್ಬರು ಅಧಿಕಾರಿಗಳಿಗೆ ದೆಹಲಿ ಕೋರ್ಟ್ ಸೋಮವಾರ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಮಧ್ಯ ಪ್ರದೇಶದ ಖಾಸಗಿ ಕಂಪನಿಗೆ ಕಲ್ಲಿದ್ದಲು ಬ್ಲಾಕ್‌ ಹಂಚಿಕೆಯಲ್ಲಿ ಗುಪ್ತಾ ಕ್ರಿಮಿನಲ್‌ ಸಂಚು ರೂಪಿಸಿದ ಆರೋಪ ಸಾಬೀತಾಗಿದ್ದು, ಸಿಬಿಐ ವಿಶೇಷ ಕೋರ್ಟ್‌ ಕಳೆದ ಶುಕ್ರವಾರ ಗುಪ್ತಾ ತಪ್ಪಿತಸ್ಥ ಎಂದು ತೀರ್ಪು ನೀಡಿತ್ತು. ಆದರೆ ಶಿಕ್ಷೆಯ ಪ್ರಮಾಣವನ್ನು ಇಂದಿಗೆ ಕಾಯ್ದಿರಿಸಿತ್ತು. 
ಅಪರಾಧಿಗಳಿಗೆ ಇಂದು ಶಿಕ್ಷೆಯ ಪ್ರಮಾಣ ಪ್ರಕಟಿಸಿದ ಕೋರ್ಟ್, ಡಿಸೆಂಬರ್ 31, 2005ರಿಂದ ನವೆಂಬರ್ 2008ರವರೆಗೆ ಕಲ್ಲಿದ್ದಲು ಇಲಾಖೆ ಕಾರ್ಯದರ್ಶಿಯಾಗಿದ್ದ ಗುಪ್ತಾ, ಅಂದಿನ ಜಂಟಿ ಕಾರ್ಯದರ್ಶಿ ಕೆ.ಎಸ್‌. ಕ್ರೊಫಾ ಹಾಗೂ ಕಲ್ಲಿದ್ದಲು ಸಚಿವಾಲಯದ ಅಂದಿನ ನಿರ್ದೇಶಕರಾಗಿದ್ದ ಕೆ.ಸಿ. ಸಮರಿಯಾ ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ಹಾಗೂ ತಲಾ ಒಂದು ಲಕ್ಷ ರುಪಾಯಿ ದಂಡ ವಿಧಿಸಿದೆ. ಅಲ್ಲದೆ ಗಣಿ ಕಂಪನಿ ಕೆಎಸ್‌ಎಸ್‌ಪಿಎಲ್ ಗೆ ಒಂದು ಕೋಟಿ ರುಪಾಯಿ ದಂಡ ಹಾಗೂ ಅದರ ವ್ಯವಸ್ಥಾಪಕ ನಿರ್ದೇಶ ಪವನ್ ಕುಮಾರ್ ಅಹ್ಲುವಾಲಿಯಾಗೆ ಮೂರು ವರ್ಷ ಜೈಲು ಮತ್ತು 30 ಲಕ್ಷ ರುಪಾಯಿ ದಂಡ ವಿಧಿಸಿ ಕೋರ್ಟ್ ತೀರ್ಪು ನೀಡಿದೆ.
ಇದೇ ವೇಳೆ ನಾಲ್ವರು ಅಪರಾಧಿಗಳಿಗೆ ಕೋರ್ಟ್ ಜಾಮೀನು ಸಹ ಮಂಜೂರು ಮಾಡಿದೆ.
ಮಧ್ಯಪ್ರದೇಶದ ಥೆಸ್‌ಗೊರಾ–ಬಿ ಮತ್ತು ರುದ್ರಪುರಿ ಕಲ್ಲಿದ್ದಲು ಗಣಿಯನ್ನು ಕೆಎಸ್‌ಎಸ್‌ಪಿಎಲ್ ಕಂಪೆನಿಗೆ ಅಕ್ರಮವಾಗಿ ಹಂಚಿಕೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಮೂವರ ವಿರುದ್ಧ ಸಿಬಿಐ 2012 ಅಕ್ಬೋಬರ್ ನಲ್ಲಿ ಎಫ್ಐಆರ್ ದಾಖಲಿಸಿತ್ತು.
SCROLL FOR NEXT