ಹೈದರಾಬಾದ್: 35 ವರ್ಷದ ಮಹಿಳೆಯೊಬ್ಬರನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದಲ್ಲದೆ ದುಷ್ಕರ್ಮಿಗಳು ಆಕೆಯ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮೆದಿಪಾಳ್ಯ ಪೊಲೀಸರ ಪ್ರಕಾರ, ಕಳೆದ ಸೋಮವಾರ ರಾತ್ರಿ ಈ ಘಟನೆ ನಡೆದಿದ್ದು, ದಿನಗೂಲಿ ಕಾರ್ಮಿಕರಾಗಿರುವ ಬೋದುಪಾಳ್ಯದ ಮಹಿಳೆ ಸೋಮವಾರ ಕೆಲಸ ಮುಗಿಸಿಕೊಂಡು ಮನೆಗೆ ಬರುತ್ತಿದ್ದ ವೇಳೆ ನಲ್ಲ ಚೆರುವ ಪ್ರದೇಶದಲ್ಲಿ ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮಹಿಳೆಯನ್ನು ಅಪಹರಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ಓರ್ವ ವ್ಯಕ್ತಿ ಮೇಲೆ ಮೇಲೆ ಅತ್ಯಾಚಾರ ಎಸಗಿದ್ದು, ಇತರರು ಕಾಮುಕನ ಕೃತ್ಯಕ್ಕೆ ರಕ್ಷಣೆ ನೀಡಿದ್ದಾರೆ.
ಅತ್ಯಾಚಾರ ಎಸಗಿದ ಬಳಿಕ ದುಷ್ಕರ್ಮಿಗಳು ಮಹಿಳೆ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿ, ಆಕೆಯ ಬಳಿ ಇದ್ದ ಚಿನ್ನದ ಸರ ಹಾಗೂ 1,200 ರುಪಾಯಿ ಕಸಿದುಕೊಂಡು ಕಳುಹಿಸಿದ್ದಾರೆ. ಮಹಿಳೆ ಕಷ್ಟಪಟ್ಟು ನಿರ್ಜನ ಪ್ರದೇಶದಿಂದ ಮುಖ್ಯ ರಸ್ತೆ ಬಂದಿದ್ದು, ಆಕೆಯ ಸ್ಥಿತಿ ಗಮನಿಸಿದ ಹಿರಿಯ ದಂಪತಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮೆದಿಪಾಳ್ಯ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.