ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ
ನವದೆಹಲಿ: ಸಹರನಾಪುರದಲ್ಲಿ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟಿದ್ದು, ಇಂತಹ ಪರಿಸ್ಥಿತಿಯಲ್ಲಿ ತುಪ್ಪ ಸುರಿಯುವಂತಹ ಮಾತುಗಳನ್ನು ಆಡಬೇಡಿ ಎಂದು ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿಯವರಿಗೆ ಬಿಜೆಪಿ ಗುರುವಾರ ಹೇಳಿದೆ.
ಉತ್ತರಪ್ರದೇಶದ ಸಹರನಾಪುರದಲ್ಲಿ ದಲಿತ ಮತ್ತು ರಜಪೂತ ಸಮುದಾಯಗಳ ನಡುವೆ ನಿನ್ನೆ ಘರ್ಷಣೆ ಏರ್ಪಟ್ಟಿತ್ತು. ಘರ್ಷಣೆಯಲ್ಲಿ ವ್ಯಕ್ತಿಯೋರ್ವ ಸಾವನ್ನಪ್ಪಿ 20ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ.
ಈ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ ವಕ್ತಾರ ನಳಿನ್ ಕೊಲ್ಹಿ ಅವರು, ಸಹರನಾಪುರದಲ್ಲಿ ಶಾಂತಿ ಮರುಸ್ಥಾಪನೆಯಾಗಬೇಕೆಂಬುದು ನಮ್ಮ ಉದ್ದೇಶವಾಗಿದೆ. ಯಾರಿಗೂ ನೋವುಗಳು ಹಾಗೂ ಸಂಕಷ್ಟಗಳು ಎದುರಾಗಬಾರದು. ಪ್ರಸ್ತುತ ಸಹರನಾಪುರದಲ್ಲಿ ಪರಿಸ್ಥಿತಿ ಹದಗೆಟ್ಟಿದ್ದು, ಇಂತಹ ಪರಿಸ್ಥಿತಿಯಲ್ಲಿ ಪ್ರಚೋದನಾತ್ಮಕ ಹೇಳಿಕೆಗಳನ್ನು ನೀಡಬಾರದು. ಪ್ರಸ್ತುತ ಇರುವ ಪರಿಸ್ಥಿತಿಯಲ್ಲಿ ಮಾಯಾವತಿಯವರು ಶಾಂತಿ ಮರುಸ್ಥಾಪನೆ ಕುರಿತಂತೆ ಚಿಂತನೆ ನಡೆಸಬೇಕೇ ಹೊರತು ಪರಿಸ್ಥಿತಿಯನ್ನು ಮತ್ತಷ್ಟು ಉದ್ವಿಗ್ನಗೊಳ್ಳುವಂತಹ ಮಾತುಗಳನ್ನು ಆಡಬಾರದು ಎಂದು ಹೇಳಿದ್ದಾರೆ.
ಮಾಯಾವತಿಯವರು ಈ ಹಿಂದೆ ಉತ್ತರಪ್ರದೇಶ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಕೋಮು ಗಲಭೆ ನಡೆದಾಗ ರಾಜ್ಯದಲ್ಲಿ ಶಾಂತಿ ಮರುಸ್ಥಾಪಿಸುವುದು ಅವರ ಕರ್ತವ್ಯ ಕೂಡ ಆಗಿರುತ್ತದೆ. ಪರಿಸ್ಥಿತಿ ಹದಗೆಟ್ಟಿದ್ದಾಗ ತುಪ್ಪ ಸುರಿಯುವಂತಹ ಕೆಲಸವನ್ನು ಮಾಡಬಾರದು. ಒಬ್ಬ ಜವಾಬ್ದಾರಿಯುತ ನಾಯಕಿಯಾಗಿ ರಾಜ್ಯದಲ್ಲಿ ಶಾಂತಿ ಮರುಸ್ಥಾಪಿಸುವುದರ ಕುರಿತಂತೆ ಮಾಯಾವಾತಿ ಮಾತನಾಡಬೇಕು ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos