ಮುಂಬೈ: ಶೀನಾ ಬೋರಾ ಕೊಲೆ ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸ್ ಅಧಿಕಾರಿಯ ಪತ್ನಿಯನ್ನು 21 ವರ್ಷದ ಅವರ ಮಗನೇ ಹತ್ಯೆ ಮಾಡಿರುವ ಸಾಧ್ಯತೆ ಇದೆ ಎಂದು ಗುರುವಾರ ಪೊಲೀಸ್ ಮೂಲಗಳು ತಿಳಿಸಿವೆ.
ಶೀನಾ ಬೋರಾ ಹತ್ಯೆ ಪ್ರಕರಣದ ತನಿಖೆ ನಡೆಸಿದ್ದ ಪೊಲೀಸ್ ಇನ್ಸ್ಪೆಕ್ಟರ್ ಧ್ಯಾನೇಶ್ವರ್ ಗನೋರ್ ಅವರ ಪತ್ನಿ ದೀಪಾಲಿ(42) ಮೃತದೇಹ ಸಂತಾ ಕ್ರುಜ್ ಪ್ರದೇಶದಲ್ಲಿರುವ ಅವರ ನಿವಾಸದಲ್ಲಿ ಮಂಗಳವಾರ ರಾತ್ರಿ ಪತ್ತೆಯಾಗಿತ್ತು. ಆದರೆ ಘಟನೆಯ ನಂತರ ಅವರ ಪುತ್ರ ಸಿದ್ಧಾಂತ್ ನಾಪತ್ತೆಯಾಗಿದ್ದಾನೆ.
ಕೊಲೆ ನಡೆದ ಸ್ಥಳದಲ್ಲಿ ರಕ್ತದಿಂದ ಸ್ಮೈಲಿಯೊಂದನ್ನು ಬಿಡಿಸಿ ಅದರಲ್ಲಿ 'ಅವಳಿಂದ ಸಾಕಾಗಿತ್ತು. ನನ್ನನ್ನು ಹಿಡಿದು ಹ್ಯಾಂಗ್ ಮಾಡಿ' ಎಂದು ಬರೆದಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಗನೋರ್ ಮನೆಯಲ್ಲಿದ್ದ ಎರಡು ಲಕ್ಷ ರುಪಾಯಿ ಸಹ ಪತ್ತೆಯಾಗಿದ್ದು, ಸಿದ್ಧಾಂತ್ ನೆ ತಾಯಿಯನ್ನು ಕೊಲೆ ಮಾಡಿ ಬಳಿಕ ಹಣದೊಂದಿಗೆ ಪರಾರಿಯಾಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಬಾಂದ್ರಾದ ನ್ಯಾಷಿನಲ್ ಕಾಲೇಜ್ ನಲ್ಲಿ ಇಂಜಿನಿಯರಿಂಗ್ ಮಾಡುತ್ತಿದ್ದ ಸಿದ್ಧಾಂತ್ ಕೋರ್ಸ್ ಅನ್ನು ಅರ್ಧಕ್ಕೆ ಕೈಬಿಟ್ಟಿದ್ದ. ಮಗನ ಶಿಕ್ಷಣದ ಬಗ್ಗೆ ತೀವ್ರ ಬೇಸರಗೊಂಡಿದ್ದ ತಾಯಿ ದೀಪಾಲಿ ಇತ್ತೀಚಿಗೆ ಆತನಿಗೆ ಪಾಕೇಟ್ ಮನಿಯನ್ನು ನಿಲ್ಲಿಸಿದ್ದರು. ಇದರಿಂದ ಆಕ್ರೋಶಗೊಂಡ ಸಿದ್ಧಾಂತ್ ಹಣಕ್ಕಾಗಿ ತಾಯಿಯನ್ನೇ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಶೀನಾ ಬೋರಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸಿದ ಮೊದಲ ತಂಡದಲ್ಲಿ ಧ್ಯಾನೇಶ್ವರ್ ಸಹ ಒಬ್ಬರು. 2012ರಲ್ಲಿ ಶೀನಾ ಬೋರಾ ಅವರನ್ನು ಅವರ ತಾಯಿ ಇಂದ್ರಾಣಿ ಮುಖರ್ಜಿ ಹತ್ಯೆ ಮಾಡಿದ್ದಾರೆ ಎಂಬ ಆರೋಪವಿದೆ. ಶೀನಾ ಬೋರಾ ಅವರ ಮಲತಂದೆ, ಇಂದ್ರಾಣಿ ಮುಖರ್ಜಿ ಅವರ ಪತಿ ಪೀಟರ್ ಮುಖರ್ಜಿ ಸಹ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾರೆ. ಘಟನೆ ನಡೆದ ಮೂರು ವರ್ಷಗಳ ನಂತರ ಪ್ರಕರಣ ಬೆಳಕಿಗೆ ಬಂದಿದ್ದು, ದೇಶದಾದ್ಯಂತ ಸಂಚಲನ ಸೃಷ್ಟಿಸಿತ್ತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos