ದೇಶ

ದೇಶಾದ್ಯಂತ ಗೋಹತ್ಯೆ ನಿಷೇಧ, ರೈತರಿಗೆ ಮಾತ್ರ ಗೋವು ಮಾರಾಟ, ಖರೀದಿಗೆ ಅವಕಾಶ

Lingaraj Badiger
ನವದೆಹಲಿ: ಕೇಂದ್ರ ಸರ್ಕಾರ ಇಂದು ಮೂರು ವರ್ಷ ಪೂರೈಸುತ್ತಿರುವ ಬೆನ್ನಲ್ಲೇ ದೇಶಾದ್ಯಂತ ಗೋಹತ್ಯೆ ನಿಷೇಧಿಸಿ ಶುಕ್ರವಾರ ಆದೇಶ ಹೊರಡಿಸಿದ್ದು, ದನ ಕರುಗಳನ್ನು ಮಾರಾಟ ಮಾಡಲು ಮತ್ತು ಖರೀದಿಸಿಲು ರೈತರಿಗೆ ಮಾತ್ರ ಅವಕಾಶ ನೀಡಲಾಗಿದೆ. 
ಈ ಸಂಬಂಧ ಕೇಂದ್ರ ಪರಿಸರ ಸಚಿವಾಲಯದ ಹೊಸ ಅಧಿಸೂಚನೆ ಹೊರಡಿಸಿದ್ದು, ಗೋವುಗಳನ್ನು ಕಸಾಯಿಖಾನೆಗೆ ಮಾರಾಟ ಮಾಡುವುದಕ್ಕೆ ಸಂಪೂರ್ಣ ನಿಷೇಧ ಹೇರಿದೆ.
ಪ್ರಾಣಿಗಳ ವ್ಯಾಪಾರಕ್ಕೆ ಹೊರಡಿಸಿರುವ ಹೊಸ ಆದೇಶದನ್ವಯ ಗೋವುಗಳನ್ನು ಭೂಮಾಲೀಕರಿಗೆ ಮಾತ್ರ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ದಾಖಲೆಗಳ ಸಮೇತ ತಾನು ಕೃಷಿಕ ಎಂಬುದನ್ನು ಸಾಬೀತುಪಡಿಸುವ ವ್ಯಕ್ತಿಗಳಿಗೆ ಮಾತ್ರ ಜಾನುವಾರುಗಳನ್ನು ಮಾರಾಟ ಮಾಡಬಹುದಾಗಿದೆ.
ಗೋವುಗಳನ್ನು ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ಮಾತ್ರ ಬಳಸಿಕೊಳ್ಳಬೇಕು, ಕಸಾಯಿಖಾನೆಗೆ ಮಾರಾಟ ಮಾಡುವುದಕ್ಕಲ್ಲ ಎಂದು 1960ರ ಪ್ರಾಣಿಗಳ ಹಿಂಸಾಚಾರ ತಡೆ ಕಾಯ್ದೆಯ ವಿಶೇಷ ವಿಧಿಯಲ್ಲಿ ಸ್ಪಷ್ಟಪಡಿಸಲಾಗಿದೆ. ಜಾನುವಾರುಗಳನ್ನು ಗಮನದಲ್ಲಿಟ್ಟುಕೊಂಡು ಈ ಷರತ್ತನ್ನು ವಿಧಿಸಲಾಗಿತ್ತು.
8 ಪುಟಗಳನ್ನೊಳಗೊಂಡ ನಿಷೇಧ ಆದೇಶದನ್ವಯ ಅಂತರ್ರಾಷ್ಟ್ರೀಯ ಗ‌ಡಿಯಲ್ಲಿ 50 ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ದನಗಳ ಸಂತೆಗಳಿರಬಾರದು, ರಾಜ್ಯದ ಗಡಿಯ 25 ಕಿ.ಮೀ ವ್ಯಾಪ್ತಿಯಲ್ಲಿ ಇಂತಹ ಸಂತೆಗಳಿಗೆ ಅವಕಾಶ ನೀಡದಿರಲು ಪರಿಸರ ಸಚಿವಾಲಯ ಕ್ರಮ ಕೈಗೊಂಡಿದೆ. ಯಾವುದೇ ರಾಜ್ಯದಿಂದ ಹೊರಗೆ ಜಾನುವಾರುಗಳನ್ನು ಸಾಗಿಸಬೇಕಾದರೆ ಸರ್ಕಾರದಿಂದ ವಿಶೇಷ ಅನುಮತಿ ಪಡೆಯಬೇಕಾಗಿದೆ.
ಮ್ಯಾಜಿಸ್ಟೇಟರ್‌ರ ನೇತೃತ್ವದಲ್ಲಿ ಜಿಲ್ಲಾ ಪ್ರಾಣಿ ಮಾರುಕಟ್ಟೆ ಸಮಿತಿಗಳ ಒಪ್ಪಿಗೆ ಇಲ್ಲದೆ ಯಾವುದೇ ದನಗಳ ಸಂತೆ ನಡೆಯುವಂತಿಲ್ಲ. ಇಂತಹ ಸಮಿತಿಗಳಲ್ಲಿ ಸರ್ಕಾರ ಅನುಮೋದಿಸಿದ ಪ್ರಾಣಿ ಕಲ್ಯಾಣ ಸಂಘಗಳ ಇಬ್ಬರು ಪ್ರತಿನಿಧಿಗಳು ಇರುತ್ತಾರೆ.
ಭಾರತದ ಬಹುತೇಕ ರಾಜ್ಯಗಳಲ್ಲಿ ವಾರ ವಾರ ದನಗಳ ಸಂತೆಗಳು ನಡೆಯುತ್ತವೆ. ಉತ್ತರಪ್ರದೇಶ, ರಾಜಸ್ತಾನ, ಹರಿಯಾಣ, ಮಹಾರಾಷ್ಟ್ರ ಸೇರಿದಂತೆ ಬಹುತೇಕ ರಾಜ್ಯಗಳಲ್ಲಿ ಇಂತಹ ವ್ಯವಸ್ಥೆ ಜಾರಿಯಲ್ಲಿದೆ.
ಕೇಂದ್ರ ಸರ್ಕಾರ ಹೊರಡಿಸಿರುವ ನಿಯಮಾನಳಿಗಳನ್ನು ಮುಂದಿನ ಮೂರು ತಿಂಗಳಲ್ಲಿ ಜಾರಿಗೆ ತರಬೇಕಾಗಿದೆ. ಗೋ ವ್ಯಾಪಾರಸ್ಥರ ಪೈಕಿ ಬಹುತೇಕ ಮಂದಿ ಬಡವರು ಹಾಗೂ ಅನಕ್ಷರಸ್ಥರಾಗಿರುವುದರಿಂದ ಅವರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದ್ದು, ಇದಕ್ಕಾಗಿ ಕಾಲಾವಕಾಶ ನೀಡಲಾಗಿದೆ.
ಗೋವುಗಳ ವ್ಯಾಪಾರಸ್ಥರು ವಿಶೇಷವಾಗಿ ಮುಸ್ಲಿಂರ ಮೇಲೆ ಹಿಂದೂ ಸಂಘಟನೆಗಳಿಂದ ಹಿಂಸಾಚಾರ ಪ್ರಕರಣಗಳು ಹೆಚ್ಚುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಈ ಆದೇಶವನ್ನು ಹೊರಡಿಸಿದೆ.
SCROLL FOR NEXT