ಭೋಪಾಲ್: ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ನಲ್ಲಿ ಪ್ರಾರಂಭವಾದ ಮಂಗಳವಾರ ರಾತ್ರಿಯ ಕೋಮು ಘರ್ಷಣೆಗೆ ತಡೆಯೊಡ್ಡಲು ೧೨ ಜನರನ್ನು ಬಂಧಿಸಲಾಗಿದ್ದು, ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ಧಾರ್ಮಿಕ ವಿವಾದದಿಂದ ಉಂಟಾದ ಈ ಘರ್ಷಣೆಯಲ್ಲಿ ವಿರೋಧ ಕೋಮುಗಳು ಕಲ್ಲೆಸತ ಮತ್ತು ಬೆಂಕಿ ಹಚ್ಚುವುದಕ್ಕೆ ಮೊರೆ ಹೋಗಿದ್ದವು. ವದಂತಿಗಳನ್ನು ಹಬ್ಬದಂತೆ ತಡೆಯಲು ಅಂತರ್ಜಾಲ ಸೇವೆಯನ್ನು ಕೂಡ ಕಡಿತಗೊಳಿಸಲಾಗಿದೆ.
"ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಪೀರ್ ಗೆಟ್ ಮತ್ತು ಇತರ ಪ್ರದೇಶಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ೧೨ ಜನರನ್ನು ಬಂಧಿಸಲಾಗಿದೆ" ಎಂದು ಭೋಪಾಲ್ ನ ಪೊಲೀಸ್ ಉಪ ಐ ಜಿ ರಮಣ್ ಸಿಂಗ್ ಸಿಕಾರ್ವಾರ್ ಹೇಳಿದ್ದಾರೆ.
ಹಳೆ ಭೋಪಾಲ್ ನ ಪ್ರದೇಶದಲ್ಲಿ ಹಮೀದಿಯ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕಾಗಿ ಭೂಮಿ ಅಗೆಯುವಾಗ ಕೆಲವು ಧಾರ್ಮಿಕ ಚಿನ್ಹೆಗಳುಳ್ಳ ವಸ್ತುಗಳು ದೊರೆತದ್ದು ಉದ್ವಿಗ್ನ ವಾತಾವರಣಕ್ಕೆ ಕಾರಣವಾಗಿದೆ.
ಒಂದು ಧರ್ಮದ ಬಣ ಈ ಧಾರ್ಮಿಕ ವಸ್ತುಗಳು ಸಿಕ್ಕವೆಂದು ವಾದ ಹೂಡಿದ್ದು ಎರಡೂ ಬಣಗಳ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಮಂಗಳವಾರ ರಾತ್ರಿ ಎರಡೂ ಬಣಗಳು ಪೀರ್ ಗೆಟ್ ಬಳಿ ಕಲ್ಲೆಸತ ಮತ್ತು ಬೆಂಕಿ ಹಚ್ಚಲು ಮುಂದಾಗಿವೆ. ಅಲ್ಲದೆ ಕೆಲವರ ಆಸ್ತಿಪಾಸ್ತಿಗೆ ಹಾನಿಯಾಗಿದ್ದು, ವಾಹನಗಳಿಗೂ ಬೆಂಕಿ ಹಚ್ಚಲಾಗಿದೆ.
"ಸಾಮಾಜಿಕ ಜಾಲತಾಣದಲ್ಲಿ ವದಂತಿ ಹಬ್ಬಿಸಿ ಜನರನ್ನು ಕೆರಳಿಸಲು ಕೆಲವು ದುಷ್ಕರ್ಮಿಗಳು ಪ್ರಯತ್ನಿಸುತ್ತಿದ್ದಾರೆ ಆದುದರಿಂದ ಅಂತರ್ಜಾಲ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ" ಎಂದು ಪೊಲೀಸರು ಹೇಳಿದ್ದಾರೆ.
ಶಾಂತಿ ಸುವ್ಯವಸ್ಥೆಯನ್ನು ಹಾಳು ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಎಚ್ಚರಿಸಿ ಟ್ವೀಟ್ ಮಾಡಿದ್ದಾರೆ.
ಇದಕ್ಕೂ ಮುಂಚಿಗಿತವಾಗಿ ಭೋಪಾಲ್ ಜನತೆಗೆ ಮನವಿ ಮಾಡಿದ್ದ ಸಿಂಗ್ ವದಂತಿಗಳನ್ನು ತಿರಸ್ಕರಿಸಿ ಶಾಂತಿ ಕಾಪಾಡಲು ಅಧಿಕಾರಿಗಳಿಗೆ ಸಹಕರಿಸುವಂತೆ ಕೋರಿದ್ದರು.