ತಿರುವನಂತಪುರಂ: ಜಾನುವಾರು ಮಾರಾಟ ಮತ್ತು ಹತ್ಯೆಯ ಬಗ್ಗೆ ಕೇಂದ್ರ ಸರ್ಕಾರ ಆದೇಶಿಸಿರುವ ಹೊಸ ಕಾನೂನಿನಲ್ಲಿ, ಗೋಮಾಂಸ ತಿನ್ನುವ ಜನರ ಹಕ್ಕನ್ನು ಕಸಿಯುವ ಯಾವುದೇ ಅಂಶ ಇಲ್ಲ ಎಂದು ಕೇರಳ ಉಚ್ಛ ನ್ಯಾಯಾಲಯ ಬುಧವಾರ ಅಭಿಪ್ರಾಯಪಟ್ಟಿದೆ.
ಯುವ ಕಾಂಗ್ರೆಸ್ ಕಾರ್ಯಕರ್ತ ಸುನಿಲ್ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮುಖ್ಯ ನ್ಯಾಯಾಧೀಶ ನವನೀತಿ ಪ್ರಸಾದ್ ಎದುರು ಬಂದಿತ್ತು. ಈಗ ಮಾತನಾಡುತ್ತಿರುವಂತೆ ಯಾವುದನ್ನು ನಿಷೇಧಿಸಲಾಗಿಲ್ಲ ಎಂದು ನ್ಯಾಯಾಧೀಶ ಹೇಳಿದ್ದಾರೆ.
"ಸದ್ಯಕ್ಕೆ ದೇಶದಲ್ಲಿರುವ ಕಾನೂನನ್ನು ಮತ್ತು ಈಗ ಬಂದಿರುವ ಹೊಸ ಆದೇಶವನ್ನು ಯಾರಾದರೂ ಸೂಕ್ಷ್ಮವಾಗಿ ಓದಿದ್ದರೆ, ಈ ರೀತಿಯ ಅಭಿಪ್ರಾಯ ತಳೆಯಲು ಸಾಧ್ಯವಿಲ್ಲ. ಹತ್ಯೆಯ ಮೇಲೆ ಆಗಲಿ ಅಥವಾ ಬೀಫ್ ಮಾರಾಟದ ಮೇಲೆ ಆಗಲಿ ಯಾವುದೇ ನಿಷೇಧ ಇಲ್ಲ. ಹೊಸ ಆದೇಶದಲ್ಲಿ ತಿಳಿಸಿರುವುದು ಏನೆಂದರೆ ಜಾತ್ರೆಗಳಲ್ಲಿ ಗುಂಪಾಗಿ ಜಾನುವಾರುಗಳನ್ನು ಮಾರಾಟ ಮಾಡುವುದನ್ನು ಮತ್ತು ಹತ್ಯೆ ಮಾಡುವುದನ್ನು ನಿಷೇಧಿಸಲಾಗಿದೆ" ಎಂದು ಮುಖ್ಯ ನ್ಯಾಯಾಧೀಶ ಅಭಿಪ್ರಾಯಪಟ್ಟಿದ್ದಾರೆ.
ಮದ್ರಾಸ್ ಉಚ್ಚ ನ್ಯಾಯಾಲಯ ಈ ಹೊಸ ಆದೇಶವನ್ನು ತಡೆ ಹಿಡಿದಿರುವ ಬಗ್ಗೆ ವಕೀಲ ಸಿ ಪಿ ಸುಧಾಕರ ಪ್ರಸಾದ್ ಗಮನ ಸೆಳೆದಾಗ, ಮುಖ್ಯ ನ್ಯಾಯಾಧೀಶ ಅದರ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಮುಖ್ಯ ನ್ಯಾಯಾಧೀಶ ತಮ್ಮ ನಿಲುವನ್ನು ಖಂಡಿತವಾಗಿ ತಿಳಿಸಿದ್ದರಿಂದ ಅರ್ಜಿದಾರ ಅರ್ಜಿಯನ್ನು ಹಿಂಪಡೆಯುವುದಾಗಿ ತಿಳಿಸಿದ್ದು, ನ್ಯಾಯಾಲಯ ಅದಕ್ಕೆ ಒಪ್ಪಿಗೆ ಸೂಚಿಸಿದೆ.