ನವದೆಹಲಿ: ಸಾಹಿತ್ಯ ಕ್ಷೇತ್ರದ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿಗೆ ಹಿಂದಿ ಕವಯಿತ್ರಿ, ಲೇಖಕಿ ಕೃಷ್ಣಾ ಸೋಬ್ತಿ ಆಯ್ಕೆಗೊಂಡಿದ್ದಾರೆ. ಸಾಹಿತ್ಯ ಕ್ಷೇತ್ರಕ್ಕೆ ಅವರು ಸಲ್ಲಿಸಿದಗಣನೀಯ ಕೊಡುಗೆಗಾಗಿ ಅವರನ್ನು ಈ ಪ್ರಶಸ್ತಿಉಗೆ ಆಯ್ಕೆ ಮಾಡಲಾಗಿದೆ ಎಂದು ಆಯ್ಕೆ ಸಮಿತಿ ತಿಳಿಸಿದೆ.
92ರ ಹರೆಯದ ಕೃಷ್ಣಾ ಸೋಬ್ತಿ 1925ರಲ್ಲಿ ಪಾಕಿಸ್ತಾನದ ಗುಜರಾತ್ನಲ್ಲಿ ಜಜಿಸಿದರು. ದೇಶ ವಿಭಜನೆ ಬಳಿಕ ಬಾರತದಲ್ಲೇ ನೆಲೆಯಾದ ಇವರು ಹಿಂದಿ ಸಾಹಿತ್ಯದಲ್ಲಿ ಹೊಸ ಶೈಲಿ ಮತ್ತು ಸೃಜನಶೀಲ ಪ್ರಯೋಗಗಳಿಗೆ ಹೆಸರಾದವರು. ಲಾಹೋರ್ ನಲ್ಲಿ ಉನ್ನತ ಶಿಕ್ಷಣ ಪಡೆದಿದ್ದ ಇವರ ಸಾಹಿತ್ಯದಲ್ಲಿ ಉರ್ದು, ಪಂಜಾಬಿ ಮತ್ತು ರಾಜಸ್ಥಾನಿ ಭಾಷೆಗಳ ಗಾಢ ಪ್ರಭಾವ ಅವರ ಕೃತಿಗಳಲ್ಲಿ ಎದ್ದು ಕಾಣುತ್ತದೆ.
ಗಂಡು-ಹೆಣ್ಣಿನ ನಡುವಿನ ಭಾವನಾತ್ಮಕ ಸಂಬಂಧ, ಸಾಮಾಜಿಕ ಬದಲಾವಣೆಯ ಸ್ವರೂಪ, ಅವರ ಸಾಹಿತ್ಯ ಕೃತಿಗಳಲ್ಲಿ ನಾವು ಗಮನಿಸಬಹುದು. 15ಕ್ಕೂ ಹೆಚ್ಚು ಕಾದಂಬರಿ, ಹಲವಾರು ಸಣ್ಣ ಕಥೆ, ಪ್ರಬಂಧಗಳನ್ನು ಬರೆದಿರುವ ಕೃಷ್ಣಾ ಅವರ ದಾರ್ ಸೆ ಬಿಚ್ಚುಡಿ, ಮಿತ್ರೋ ಮರಜಾನಿ, ಜಿಂದಗಿನಾಮಾ, ದಿಲ್ –ಒ–ದಾನಿಶ್, ಏ ಲಡಕಿ, ಸೂರಜ್ಮುಖಿ ಅಂಧೇರೆ ಕೆ, ಗುಜರಾತ್ ಪಾಕಿಸ್ತಾನ ಸೆ ಗುಜರಾತ್ ಹಿಂದುಸ್ತಾನ್ ಕೃತಿಗಳು ಅವರಿಗೆ ಖ್ಯಾತಿ ತಂದುಕೊಟ್ಟಿವೆ.
ಇವರ ಬಹುತೇಕ ಕೃತಿಗಳು ಭಾರತೀಯ ಭಾಷೆಗಳಿಗೆ ಸೇರಿದಂತೆ ಇಂಗ್ಲಿಷ್, ರಷ್ಯಾ ಮತ್ತು ಸ್ವೀಡನ್ ಭಾಷೆಗೆ ಭಾಷಾಂತರಗೊಂಡಿವೆ. ಡೋಗ್ರಿ ಭಾಷೆಯ ಲೇಖಕ ಶಿವನಾಥ್ ಅವರನ್ನು ವಿವಾಹವಾಗಿರುವ ಇವರು ಇದೀಗ ಪತಿಯೊಂದಿಗೆ ದೆಹಲಿಯಲ್ಲಿ ವಾಸವಿದ್ದಾರೆ.
ಕೃಷ್ಣಾ ಅವರ ಸಾಹಿತ್ಯ ಕೊಡುಗೆಯನ್ನು ಪರಿಗಣಿಸಿ ಅನೇಕ ಪ್ರಶಸ್ತಿ ಪುರಸ್ಕಾರಗಳು ಬಂದಿದ್ದು ಅವುಗಳಲ್ಲಿ ‘ಜಿಂದಗಿನಾಮಾ’ಕ್ಕೆ ಸಂದ 1980ರ ಸಾಲಿನ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪದ್ಮಭೂಷಣ, ಸಾಹಿತ್ಯ ಅಕಾಡೆಮಿ ಫೆಲೋಶಿಪ್, ಹಿಂದಿ ಅಕಾಡೆಮಿ ಪ್ರಶಸ್ತಿ, ಮೈಥಲಿ ಶರಣ್ ಗುಪ್ತಾ ಸನ್ಮಾನ ಸಂದಿದೆ. ಇದೀಗ ಕೃಷ್ಣಾ ಅವರು 53ನೇ ಜ್ಞಾನಪೀಠ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos