ನವದೆಹಲಿ: ನಟಿ ದೀಪಿಕಾ ಪಡುಕೋಣೆ ಅಭಿನಯದ ಬಾಲಿವುಡ್ ಚಿತ್ರ ಪದ್ಮಾವತಿ ವಿವಾದ ಮುಂದುವರೆದಿದ್ದು, ಚಿತ್ರ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ವಿರುದ್ಧ ಬಿಜೆಪಿ ಮುಖಂಡರ ಟೀಕಾ ಪ್ರಹಾರ ಮುಂದುವರೆದಿದೆ.
ಇನ್ನು ಇದಕ್ಕೆ ಸೇರ್ಪಡೆ ಎಂಬಂತೆ ಬಿಜೆಪಿ ಸಂಸದ ಗಿರಿರಾಜ್ ಸಿಂಗ್ ಅವರು ನಿರ್ದೇಶಕರನ್ನು ತರಾಟೆಗೆ ತೆಗೆದುಕೊಂಡಿದ್ದು, ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿಗೆ ಧೈರ್ಯವಿದ್ದರೆ ಅನ್ಯ ಕೋಮಿನ ಕುರಿತು ಚಿತ್ರಗಳನ್ನು ನಿರ್ಮಿಸಲಿ ಎಂದು ಸವಾಲೆಸೆದಿದ್ದಾರೆ. ಇವರ ಚಿತ್ರಗಳ ಯಶಸ್ಸಿಗಾಗಿ ಹಿಂದೂ ದೇವರು, ಹಿಂದೂ ಗುರುಗಳು ಹಾಗೂ ಹಿಂದೂ ಯೋಧರನ್ನು ಹೀಗಳೆಯುತ್ತಿದ್ದಾರೆ. ಇನ್ನು ಮುಂದೆ ಇಂತಹವುಗಳನ್ನು ಇನ್ನುಮುಂದೆ ಸಹಿಸಲಸಾಧ್ಯ ಎಂದು ಗಿರಿರಾಜ್ ಸಿಂಗ್ ಹೇಳಿದ್ದಾರೆ.
ಭಾರತೀಯನಾರಿಯ ಘನತೆಗೆ ಚ್ಯುತಿಯಾಗಬಾರದು: ಉಮಾಭಾರತಿ
ಇನ್ನು ಗಿರಿರಾಜ್ ಸಿಂಗ್ ರಂತೆಯೇ ಕೇಂದ್ರ ಸಚಿವೆ ಉಮಾಭಾರತಿ ಅವರೂ ಕೂಡ ಪದ್ಮಾವತಿ ಚಿತ್ರದ ವಿರುದ್ಧ ಕಿಡಿಕಾರಿದ್ದು, ಯಾವುದೇ ಕಾರಣಕ್ಕೆ ಭಾರತೀಯ ನಾರಿಯ ಘನತೆಗೆ ಚ್ಯುತಿ ತರುವಂತಹ ಕೆಲವಾಗಬಾರದು. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಇತಿಹಾಸವನ್ನು ತಿರುಚುವ ಅಥವಾ ಅಪಹಾಸ್ಯ ಮಾಡುವ ಕೆಲಸವನ್ನು ಯಾರೂ ಮಾಡಬಾರದು. ಐತಿಹಾಸಿಕ ಚಿತ್ರಗಳನ್ನು ನಿರ್ಮಿಸುವಾಗ ಯಾರೂ ಕೂಡ ಸತ್ಯಾಂಶವನ್ನು ತಿರುಚುವುದು ಅಪರಾಧವಾಗುತ್ತದೆ ಎಂದು ಹೇಳಿದರು.
ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತಿ ಚಿತ್ರದಲ್ಲಿ ನಟಿ ದೀಪಿಕಾ ಪಡುಕೋಣೆ, ನಟ ರಣ್ವೀರ್ ಸಿಂಗ್ ಹಾಗೂ ನಟ ಶಾಹಿದ್ ಕಪೂರ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.