ಚೆನ್ನೈನ ಮದ್ರಾಸ್ ವಿವಿ ಸಭಾಂಗಣದಲ್ಲಿ ಪ್ರಧಾನಿ ಮೋದಿ
ಚೆನ್ನೈ: ಸಮಾಜದಲ್ಲಿ ಬದಲಾವಣೆ ತರುವ ಶಕ್ತಿ ಮಾಧ್ಯಮಗಳಿಗಿದ್ದು, ಮಾಧ್ಯಮಗಳು ಪ್ರಜಾಪ್ರಭುತ್ವದಲ್ಲಿ ನಾಲ್ಕನೆ ಅಂಗಗಳಾಗಿವೆ ಎಂದು ಪ್ರಧಾನಿ ಮೋದಿ ಸೋಮವಾರ ಹೇಳಿದ್ದಾರೆ.
ಚೆನ್ನೈನ ಮದ್ರಾಸ್ ವಿವಿ ಸಭಾಂಗಣದಲ್ಲಿ ಇಂದು ತಮಿಳು ದಿನಪತ್ರಿಕೆಯೊಂದರ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು "ಮಾಧ್ಯಮಗಳು ಪ್ರಜಾಪ್ರಭುತ್ವದಲ್ಲಿ ನಾಲ್ಕನೆ ಅಂಗಗಳಾಗಿದ್ದು, ಭಾರತದ ಮಾಧ್ಯಮ ಶಕ್ತಿಗೆ ಬ್ರಿಟೀಷ್ ಸರ್ಕಾರ ಕೂಡ ಬೆದರಿತ್ತು. ಸ್ವಚ್ಛ ಭಾರತ ಅಭಿಯಾನದಲ್ಲಿ ಮಾಧ್ಯಮಗಳ ಪಾತ್ರ ಅಗತ್ಯ ಎಂದು ಹೇಳಿದರು.
"ಇಂದಿನ ದಿನಪತ್ರಿಕೆಗಳು ಕೇವಲ ಸುದ್ದಿಗಳನ್ನು ಮಾತ್ರ ನೀಡುವುದಲ್ಲದೇ ನಮ್ಮ ಆಲೋಚನ ಲಹರಿಯನ್ನೇ ಬದಲಾಯಿಸುವ ಅಗಾಧವಾದ ಶಕ್ತಿಯನ್ನು ಹೊಂದಿವೆ. ಯಾವುದೇ ವಿಚಾರವಾಗಿ ಬಹುಕೋನದಲ್ಲಿ ಆಲೋಚಿಸುವ ದೃಷ್ಟಿಕೋನವನ್ನು ಪರಿಚಯಿಸಿವೆ. ಒಂದು ಅರ್ಥದಲ್ಲಿ ಹೇಳುವುದಾದರೆ ಸಮಾಜದಲ್ಲಿ ಬದಲಾವಣೆ ತರುವ ಶಕ್ತಿ ಮಾಧ್ಯಮಗಳಿಗಿದೆ. ಇದೇ ಕಾರಣಕ್ಕೆ ಮಾಧ್ಯಮಗಳನ್ನು ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದು ಕರೆಯುತ್ತಾರೆ. ಮಾಧ್ಯಮಗಳ ಶಕ್ತಿ ಎಂತಹುದು ಎನ್ನುವುದಕ್ಕೆ ಭಾರತೀಯ ಮಾಧ್ಯಮಗಳಿಗೆ ಬ್ರಿಟೀಷ್ ಸರ್ಕಾರ ಕೂಡ ಬೆದರಿತ್ತು. 1878ರಲ್ಲಿ ವರ್ನಾಕ್ಯುಲರ್ ಪೇಪರ್ ವಿರುದ್ಧ ಬಲ ಪ್ರಯೋಗಕ್ಕೆ ಮುಂದಾಗಿತ್ತು.
"ಅಂದು ಹೇಗೆ ಸ್ಥಳೀಯ ಭಾಷೆಗಳಲ್ಲಿ ದೈನಿಕಗಳ ಮುದ್ರಣ ಪ್ರಾಮುಖ್ಯತೆ ಪಡೆದಿತ್ತೋ ಇಂದಿಗೂ ಅದೇ ಪ್ರಾಮುಖ್ಯತ ಪತ್ರಿಕೆಗಳಿಗೆ ಇದೆ. ಮಾಧ್ಯಮಗಳು ಮತ್ತು ಪತ್ರಿಕೆಗಳ ಮೇಲೆ ಜನರು ಇರಿಸಿರುವ ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳಲು ಹೆಚ್ಚಿನ ಪ್ರಯತ್ನ ಮಾಡಬೇಕು. ಮಾಧ್ಯಮ ಸಂಸ್ಥೆಗಳ ನಡುವಿನ ಆರೋಗ್ಯಕರ ಸ್ಪರ್ಧೆ ಪ್ರಜಾಪ್ರಭುತ್ವಕ್ಕೆ ಆರೋಗ್ಯಕರವಾಗಿರುತ್ತದೆ. ಸಾರ್ವಜನಿಕ ಹಿತಾಸಕ್ತಿ ಮೇರೆಗೆ ಸಂಪಾದಕೀಯಗಳ ರಚನೆಯಾಗಬೇಕು. "ಮಾಧ್ಯಮಗಳು ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿದ್ದು, ಅದಕ್ಕೆ ಖಂಡಿತಾ ಅಧಿಕಾರವಿದೆ. ಆದರೆ ಆ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುವುದು ಅಪರಾಧ ಎಂದು ಮಹಾತ್ಮಾ ಗಾಂಧಿ ಹೇಳುತ್ತಿದ್ದರು. ಇತ್ತೀಚೆಗೆ ಸಾಕಷ್ಟು ಸುದ್ದಿ ಪತ್ರಿಕೆಗಳು ಹಾಗೂ ಮಾಧ್ಯಮಗಳು ಸಾಕಷ್ಟು ರಾಜಕೀಯ ಕೇಂದ್ರಿತವಾಗುತ್ತಿವೆ. ರಾಜಕೀಯ ಹೊರತಾಗಿಯೂ ದೇಶದಲ್ಲಿ ಸಾಕಷ್ಟು ಸಂಗತಿಗಳಿವೆ. ಮಾಧ್ಯಮಗಳು 125 ಕೋಟಿ ಭಾರತೀಯರನ್ನು ಪ್ರತಿನಿಧಿಸುವ ಸಂಪರ್ಕ ತಾಣಗಳಾಗಿದ್ದು, ಇನ್ನು ಸಾಕಷ್ಟು ವಿಚಾರಗಳ ಕುರಿತು ಮಾಧ್ಯಮಗಳು ಬೆಳಕು ಚೆಲ್ಲಬೇಕು" ಎಂದು ಪ್ರಧಾನಿ ಮೋದಿ ಹೇಳಿದರು.
ಹವಾಮಾನ ಬದಲವಾಣೆ ವಿಶ್ವಕ್ಕೆ ದೊಡ್ಡ ಸವಲಾಗಿದ್ದು, ಈ ಕ್ಲಿಷ್ಟ ಸಮಸ್ಯೆ ಕುರಿತಂತೆ ಮಾಧ್ಯಮಗಳು ಬೆಳಕು ಚೆಲ್ಲಬೇಕು. ಮತ್ತು ಪ್ರಜೆಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಪ್ರಧಾನಿ ಮೋದಿ ಹೇಳಿದರು.
ಮಳೆ ಪೀಡಿತ ತಮಿಳುನಾಡು ರಾಜ್ಯಕ್ಕೆ ಕೇಂದ್ರ ನೆರವು: ಪ್ರಧಾನಿ ಮೋದಿ ಭರವಸೆ
ಇದಕ್ಕೂ ಮೊದಲು ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ಮೋದಿ ಅವರನ್ನು ತಮಿಳುನಾಡು ಸರ್ಕಾರದ ಅಧಿಕಾರಿಗಳು ಸ್ವಾಗತಿಸಿದರು. ಈ ವೇಳೆ ತಮಿಳುನಾಡು ಸಿಎಂ ಪಳನಿಸ್ವಾಮಿ, ಉಪ ಮುಖ್ಯಮಂತ್ರಿ ಓ ಪನ್ನೀರ್ ಸೆಲ್ವಂ ಅವರು ಸೇರಿದಂತೆ ಎಐಎಡಿಎಂಕೆಯ ಹಲವು ನಾಯಕರು ಸ್ವಾಗತಕೋರಿದರು. ಈ ವೇಳೆ ಅಧಿಕಾರಿಗಳಿಂದ ಮಳೆ ಕುರಿತಾದ ಮಾಹಿತಿ ಪಡೆದ ಪ್ರಧಾನಿ ಮೋದಿ ಮಳೆ ಪೀಡಿತ ಪ್ರದೇಶಗಳಲ್ಲಿನ ಕಾರ್ಯಾಚರಣೆಗೆ ಕೇಂದ್ರ ಸರ್ಕಾರ ತಮಿಳುನಾಡು ಸರ್ಕಾರಕ್ಕೆ ಸೂಕ್ತ ನೆರವು ನೀಡಲಿದೆ ಎಂದು ಹೇಳಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos