ಶ್ರೀನಗರ: ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಕಳೆದ ರಾತ್ರಿ ನಡೆದ ಎನ್ ಕೌಂಟರ್ ನಲ್ಲಿ ಮೂವರು ಉಗ್ರರನ್ನು ಭಾರತೀಯ ಸೇನೆ ಕೊಂದು ಹಾಕಿದೆ. ಇದರಲ್ಲಿ ಸೇನೆಯ ಯೋಧರೊಬ್ಬರು ಕೂಡ ಹುತಾತ್ಮರಾಗಿದ್ದಾರೆ.
ಮೂವರನ್ನು ಉಗ್ರರನ್ನು ಸದೆಬಡಿಯಲಾಗಿದ್ದು ಗುಂಡಿನ ಚಕಮಕಿ ನಿಂತಿದೆ ಎಂದು ಸೇನೆಯ ಮೂಲಗಳು ತಿಳಿಸಿವೆ.
ಜಮ್ಮು ಕಾಶ್ಮೀರದ ಪುಲ್ವಾಮ ಜಿಲ್ಲೆಯ ಅಗ್ಲರ್ ಪ್ರದೇಶದ ಕಾಂಡಿ ಎಂಬಲ್ಲಿ ಯೋಧರು ಮತ್ತು ಉಗ್ರಗಾಮಿಗಳ ನಡುವೆ ಎನ್ ಕೌಂಟರ್ ನಡೆದಿದ್ದು ಸೇನೆಯ ಯೋಧರೊಬ್ಬರು ಕೂಡ ಹುತಾತ್ಮರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಗುಂಡಿನ ದಾಳಿಯಲ್ಲಿ ನಾಗರಿಕರೊಬ್ಬರಿಗೆ ಗಾಯಗಳಾಗಿವೆ.
ಕೆಲವು ಉಗ್ರರು ಅಡಗಿ ಕುಳಿತಿದ್ದ ಬಗ್ಗೆ ಮಾಹಿತಿ ಪಡೆದ ಭದ್ರತಾ ಪಡೆ ಯೋಧರು ಕಾಂಡಿ ಬೆಲ್ಟ್ ಪ್ರದೇಶವನ್ನು ಸುತ್ತುವರೆದು ಶೋಧ ಕಾರ್ಯ ಆರಂಭಿಸಿದ್ದರು. ಶೋಧ ಕಾರ್ಯ ಗುಂಡಿನ ಚಕಮಕಿಗೆ ಕಾರಣವಾಗಿ ಉಗ್ರರು ಯೋಧರತ್ತ ಗುಂಡಿನ ದಾಳಿ ನಡೆಸಲು ಆರಂಭಿಸಿದರು. ಸದ್ಯ ದಾಳಿ ನಿಂತಿದ್ದು ಶೋಧ ಕಾರ್ಯ ಮುಂದುವರಿದಿದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.
ಮೊನ್ನೆ 2ರಂದು ಪುಲ್ವಾಮ ಜಿಲ್ಲೆಯ ಪಂಪೊರೆ ಪ್ರದೇಶದ ಸಂಪೂರ ಎಂಬಲ್ಲಿ ಉಗ್ರಗಾಮಿಗಳೊಂದಿಗೆ ನಡೆದ ಎನ್ ಕೌಂಟರ್ ನಲ್ಲಿ ಇಬ್ಬರು ಸೇನಾ ಯೋಧರು ಮತ್ತು ಸಿಆರ್ ಪಿಎಫ್ ಜವಾನ ಗಾಯಗೊಂಡಿದ್ದರು. ಉಗ್ರಗಾಮಿಯ ಸಾವಿನೊಂದಿಗೆ ಎನ್ ಕೌಂಟರ್ ಅಂದು ಕೊನೆಗೊಂಡಿತ್ತು.
ಭಯೋತ್ಪಾದನೆ ವಿರುದ್ಧದ ಕಾರ್ಯಾಚರಣೆ ಮುಂದುವರೆಯಲಿದೆ: ಸೇನಾ ಮುಖ್ಯಸ್ಥ
ಕಾಶ್ಮೀರದಲ್ಲಿ ಭಯೋತ್ಪಾದನೆ ನಿರ್ಮೂಲನೆ ಮಾಡುವ ಗುರಿಯನ್ನು ಭಾರತೀಯ ಸೇನೆ ಹೊಂದಿದ್ದು, ಉಗ್ರರ ವಿರುದ್ಧದ ನಮ್ಮ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಮಂಗಳವಾರ ಹೇಳಿದ್ದಾರೆ.
ಪುಲ್ವಾಮಾ ಎನ್ ಕೌಂಟರ್ ಪ್ರಕರಣ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಉಗ್ರರ ವಿರುದ್ಧದ ಇಂತಹ ಕಾರ್ಯಾಚರಣೆಗಳು ಹೀಗೆಯೇ ಮುಂದುವರೆಯಲಿದೆ. ಭಯೋತ್ಪಾದನೆಯನ್ನು ಪಸರುವಂತೆ ಮಾಡುತ್ತಿರುವ ಜನರನ್ನು ನಾವು ಮಟ್ಟ ಹಾಕುತ್ತೇವೆ. ಕಾಶ್ಮೀರದಲ್ಲಿ ಭಯೋತ್ಪಾದನೆ ನಿರ್ಮೂಲನೆ ಮಾಡುವ ಗುರಿಯನ್ನು ಸೇನೆ ಹೊಂದಿದ್ದು, ಉಗ್ರ ಮಸೂದ್ ಅಝರ್ ಅಳಿಯನೇ ಆಗಲೀ ಅಥವಾ ಬೇರಾರೇ ಆಗಲೀ ಅವರನ್ನು ಮಟ್ಟ ಹಾಕುದ್ದೇವೆಂದು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos