ಮುಂಬೈ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಒಡೆತನದ ಭಿಂಡಿ ಬಜಾರಿನ ಉಪಾಹಾರ ಗೃಹವನ್ನು ಖರೀದಿಸಿರುವ ಕಟ್ಟಾರ್ ಹಿಂದುತ್ವವಾದಿ ನಾಯಕ ಸ್ವಾಮಿ ಚಕ್ರಪಾಣಿ ಅವರು ಅದನ್ನು ಸಾರ್ವಜನಿಕ ಶೌಚಾಲಯವಾಗಿ ಪರಿವರ್ತಿಸಲು ಮುಂದಾಗಿದ್ದಾರೆ.
1993ರ ಮುಂಬೈ ಸರಣಿ ಸ್ಫೋಟದ ರೂವಾರಿ ದಾವೂದ್ ಹೆಸರಿನಲ್ಲಿ ಬೆಲೆಬಾಳುವ ಅನೇಕ ಸ್ವತ್ತುಗಳು ಭಾರತದಲ್ಲಿದ್ದು ಅವೆಲ್ಲವನ್ನೂ ಸ್ವಾದೀನಕ್ಕೆ ತೆಗೆದುಕೊಂಡಿರುವ ಕೇಂದ್ರ ಸರ್ಕಾರ ಹರಾಜಿಗೆ ಪ್ರಯತ್ನಿಸುತ್ತಿದೆ.
ಭೂಗತ ಪಾತಕಿಗೆ ಸೇರಿದ ಈ ಸ್ವತ್ತುಗಳು ವಾಸಕ್ಕೆ ಅಥವಾ ಉಪಾಹಾರ ಕೇಂದ್ರವಾಗಿ ಮರು ಬಳಕೆಯಾಗಬಾರದು ಎನ್ನುವುದು ಅಖಿಲ ಭಾರತ ಹಿಂದೂ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಸ್ವಾಮಿ ಚಕ್ರಪಾಣಿಯವರ ಬಲವಾದ ಧೋರಣೆಯಾಗಿದ್ದು ಅದಕ್ಕಾಗಿಯೇ ಅವರು ಈ ಸ್ವತ್ತುಗಳನ್ನು ಖರೀದಿಸುತ್ತಿದ್ದಾರೆ.
ಹೋಟೆಲ್ ಅಫ್ರೋಜ್ ಅನ್ನು ಖರೀದಿಸಿದ ಬಳಿಕ ಅದನ್ನು ಸಾರ್ವಜನಿಕ ಟಾಯ್ಲೆಟ್ ಆಗಿ ಪರಿವರ್ತಿಸುತ್ತೇವೆ. ಅಲ್ಲಿ ನಾವು ಆಧುನಿಕ ಶೈಲಿಯ ಟಾಯ್ಲೆಟ್ ಕಟ್ಟಿಸಿ ಸಾರ್ವಜನಿಕರ ಉಚಿತ ಬಳಕೆಗೆ ಅನುವು ಮಾಡಿಕೊಡುತ್ತೇವೆ. ಟಾಯ್ಲೆಟ್ ಸಿದ್ಧಗೊಂಡ ನಂತರ ಸ್ವಚ್ಛ ಭಾರತ್ ಕಾರ್ಯಕ್ರಮದಡಿ ಅದರ ಉದ್ಘಾಟನೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್ ಅವರನ್ನು ಆಹ್ವಾನಿಸಲಾಗುವುದು ಎಂದರು.
2015ರಲ್ಲಿ ದಾವೂದ್ ಇಬ್ರಾಹಿಂ ಬಳಸುತ್ತಿದ್ದ ಹುಂಡೈ ಆಕ್ಸೆಂಟ್ ಕಾರನ್ನು ಹರಾಜಿನಲ್ಲಿ 32 ಸಾವಿರ ರುಪಾಯಿಗೆ ಖರೀದಿಸಿದ್ದ ಚಕ್ರಪಾಣಿ ಅದನ್ನು ಸಾರ್ವಜನಿಕವಾಗಿ ಸುಟ್ಟು ಹಾಕಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos