ಮುಂಬೈ: ಗುಜರಾತ್ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡೇ ಕೇಂದ್ರ ಸರ್ಕಾರ ಜಿಎಸ್ ಟಿ ಕಡಿತಗೊಳಿಸಿದೆ ಎಂದು ಶಿವಸೇನೆ ಆರೋಪಿಸಿದೆ.
ಅಗತ್ಯ ವಸ್ತುಗಳನ್ನೂ ಶೇ.28ರಷ್ಟರ ತೆರಿಗೆ ವ್ಯಾಪ್ತಿಗೆ ಸೇರಿಸುವ ಮೂಲಕ ಕೇಂದ್ರದ ಬಿಜೆಪಿ ಸರ್ಕಾರ ಪ್ರಜೆಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಇದೀಗ ಗುಜರಾತ್ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ 211 ವಸ್ತುಗಳ ತೆರಿಗೆಯನ್ನು ಕಡಿತಗೊಳಿಸಿ ಜನರ ಕಣ್ಣೊರೆಸುವ ನಾಟಕ ಮಾಡುತ್ತಿದೆ. ಇದು ಕೇವಲ ಬಿಜೆಪಿ ಪಕ್ಷದ ರಾಜಕೀಯ ನಾಟಕವಷ್ಟೇ ಎಂದು ಶಿವಸೇನೆ ಕಿಡಿಕಾರಿದೆ.
ತನ್ನ ಮುಖವಾಣಿ ಸಾಮ್ನಾದಲ್ಲಿ ಈ ಬಗ್ಗೆ ಕಿಡಿಕಾರುವ ಶಿವಸೇನೆ, ಈ ಹಿಂದೆ ವ್ಯಾಪಕ ಪ್ರತಿಭಟನೆಗಳ ಹೊರತಾಗಿಯೂ ಯಾವುದೇ ಕಾರಣಕ್ಕೂ ಜಿಎಸ್ ಟಿಯಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಘೋಷಸಿದ್ದ ಕೇಂದ್ರ ಸರ್ಕಾರ ಇದೀಗ ದಿಢೀರನೇ ಏಕೆ ತೆರಿಗೆ ಕಡಿತಗೊಳಿಸಿದೆ. ಗುಜರಾತ್ ನಲ್ಲಿ ಬಿಜೆಪಿ ಶಾಸಕರು ಗ್ರಾಮಗಳನ್ನು ಇತರೆ ಪಕ್ಷದವರು ಪ್ರವೇಶಿಸಲು ಬಿಡುತ್ತಿಲ್ಲ. ಗುಡರಾತ್ ಚುನಾವಣೆಯಲ್ಲಿ ವ್ಯಾಪಕ ಪ್ರಮಾಣದ ಕಪ್ಪು ಹಣ ಹರಿಯುವ ಶಂಕೆ ವ್ಯಕ್ತವಾಗುತ್ತಿದೆ. ಅವೈಜ್ಞಾನಿಕ ಜಿಎಸ್ ಟಿ ಜಾರಿಯಿಂದಾಗಿ ಕೇಂದ್ರ ಸರ್ಕಾರ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳ ಬೆನ್ನೆಲುಬನ್ನೇ ಮುರಿದಿದ್ದು, ಹಣದುಬ್ಬರ ಪ್ರಮಾಣವನ್ನು ಏರಿಕೆ ಮಾಡಿದೆ.
ಜನಸಾಮಾನ್ಯರ ಆರ್ಥಿಕ ಯೋಜನೆಗಳನ್ನೇ ಬುಡಮೇಲು ಮಾಡಿದ್ದು, ಅವರ ಭವಿಷ್ಯದ ಯೋಜನೆಗಳಿಗೆ ಕಲ್ಲು ಹಾಕಿದೆ. ಇದನ್ನು ಪ್ರತಿಭಟಿಸಲು ಮುಂದಾದ ಸಣ್ಣ ಸಣ್ಣ ಉಧ್ಯಮಿಗಳನ್ನು ಪೊಲೀಸರನ್ನು ಛೂಬಿಟ್ಟು ಥಳಿಸಲಾಗಿದೆ. ಈ ಲಾಠಿ ಏಟನ್ನು ಜನ ಮರೆಯುವುದಿಲ್ಲ. ಖಂಡಿತಾ ಗುಜರಾತ್ ಚುನಾವಣೆಯಲ್ಲಿ ಬಿಜೆಪಿಗೆ ತಿರುಗೇಟು ನೀಡುತ್ತಾರೆ ಎಂದು ಸಾಮ್ನಾದಲ್ಲಿ ಶಿವಸೇನೆ ಹೇಳಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos