ತಿರುವನಂತಪುರಂ: ಬಾಹುಬಲಿ-2 ಚಿತ್ರದಲ್ಲಿ ನಟ ಪ್ರಭಾಸ್ ಆನೆ ಮೇಲೆ ಏರುವ ದೃಶ್ಯ ಅಭಿಮಾನಿಗಳ ಪ್ರಶಂಸೆಗೆ ಕಾರಣವಾಗಿತ್ತು. ಇದೀಗ ಈ ಸ್ಟಂಟ್ ಕೇರಳದಲ್ಲಿ ಓರ್ವ ಯುವಕನ ಸ್ಥಿತಿ ಗಂಭೀರವಾಗಲು ಕಾರಣವಾಗಿದ್ದು, ಬಾಹುಬಲಿಯಂತೆಯೇ ಯುವಕನೋರ್ವ ತಾನೂ ಕೂಡ ಆನೆ ಮೇಲೆ ಏರುವ ಸ್ಟಂಟ್ ಮಾಡಲು ಹೋಗಿ ಬೆನ್ನು ಮೂಳೆ ಮುರಿಸಿಕೊಂಡಿದ್ದಾನೆ.
ಬಾಹುಬಲಿ ಸಿನಿಮಾದಂತೆ ಯುವಕ ಸೊಂಡಿಲು ಮೂಲಕ ಆನೆ ಮೇಲೆ ಹತ್ತಲು ಹೋದ ವೇಳೆ ಆನೆ ಆತನನ್ನು ಅದೇ ಸೊಂಡಿಲಿನ ಮೂಲಕ ದೂರಕ್ಕೆ ಬಿಸಾಕಿದೆ. ಇದರಿಂದ ಯುವಕ ದೂರ ಹೋಗಿ ಬಿದ್ದಿದ್ದು, ಆತನ ಬೆನ್ನುಮೂಳೆ ಮುರಿದಿದೆ ಎಂದು ತಿಳಿದುಬಂದಿದೆ.
ವಿಡಿಯೋದಲ್ಲಿರುವಂತೆ... ಯುವಕ ಮೊದಲು ಆನೆಗೆ ಬಾಳೆ ಹಣ್ಣು ತಿನ್ನಿಸುತ್ತಾನೆ. ನಂತರ ಆನೆಯ ಹಣೆಗೆ ಮುತ್ತು ನೀಡಿ ಅದರ ಸೊಂಡಲಿನ ಮೇಲೆ ಕಾಲಿಡಲು ಹೋಗುತ್ತಾನೆ. ಆಗ ಆನೆ ಆತನನ್ನು ಸೊಂಡಿಲಿನ ಮೂಲಕ ದೂರ ಬಿಸಾಕಿದೆ. ಈ ವೇಳೆ ಅಲ್ಲೇ ಇದ್ದ ಇನ್ನೋರ್ವ ಆನೆ ಮೇಲೆ ಹತ್ತದಂತೆ ಹೇಳಿದರೂ ಯುವಕ ಕೇಳಿಲ್ಲ. ಘಟನೆ ವೇಳೆ ಯುವಕ ಕುಡಿದಿದ್ದ ಎನ್ನಲಾಗಿದೆ.
ಕೇರಳದ ಇಡುಕ್ಕಿ ಜಿಲ್ಲೆಯ ಪೆರಿಂಗಸ್ಸರಿ ಗುಡ್ಡದಲ್ಲಿ ಈ ಘಟನೆ ನಡೆದಿದ್ದು, ಆನೆಗೆ ಮುತ್ತಿಡುವ ದೃಶ್ಯವನ್ನು ಯುವಕ ಫೇಸ್ ಬುಕ್ ನಲ್ಲಿ ಲೈವ್ ಮಾಡಿದ್ದ. ಇದೀಗ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆಯಾದರೂ. ಆನೆ ಆತನನ್ನು ಎಸೆದ ರಭಸಕ್ಕೆ ಆತನ ಬೆನ್ನು ಮೂಳೆ ಮುರಿದಿದೆ. ಪ್ರಸ್ತುತ ಆತನಿಗೆ ಐಸಿಯು ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ಬಾಹುಬಲಿ ಚಿತ್ರದಲ್ಲಿ ತೋರಿಸಿರುವುದು ಗ್ರಾಫಿಕ್ಸ್ ಆನೆ ಎಂದು ಈ ಹಿಂದೆಯೇ ಚಿತ್ರತಂಡ ಸ್ಪಷ್ಟಪಡಿಸಿದ್ದರೂ, ಕೆಲ ಮತಿಗೇಡಿಗಳು ಅಪಾಯವನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ. ಸಿನಿಮಾ ಬೇರೇ ನಿಜ ಜೀವನ ಬೇರೆ ಎಂದು ತಿಳಿದುಕೊಳ್ಳಬೇಕಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos