ದೇಶ

ಮಾತುಕತೆ ಮೂಲಕ ಎಲ್ಲಾ ವಿವಾದಗಳಿಗೆ ಪರಿಹಾರ: ಮುಸ್ಲಿಮ್ ನಾಯಕರ ಭೇಟಿ ಬಳಿಕ ಶ್ರೀ ಶ್ರೀ ರವಿಶಂಕರ್

Lingaraj Badiger
ಲಖನೌ: ಅಯೋಧ್ಯೆಯ ರಾಮ ಮಂದಿರ–ಬಾಬರಿ ಮಸೀದಿ ವಿವಾದವನ್ನು ನ್ಯಾಯಾಲಯದ ಹೊರಗಡೆ ಮಾತುಕತೆ ಮೂಲಕ ಪರಿಹರಿಸುವ ನಿಟ್ಟಿನಲ್ಲಿ ಸಂಧಾನಕ್ಕೆ ಯತ್ನಿಸುತ್ತಿರುವ ಆರ್ಟ್‌ ಆಫ್‌ ಲಿವಿಂಗ್‌ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್‌ ಅವರು ಶುಕ್ರವಾರ ಲಖನೌನಲ್ಲಿ ಮುಸ್ಲಿಮ್ ನಾಯಕರನ್ನು ಭೇಟಿ ಮಾಡಿ ಚರ್ಚಿಸಿದರು.
ಮುಸ್ಲಿಮ್ ನಾಯಕರ ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀ ಶ್ರೀ ರವಿಶಂಕರ್, ಮಾತುಕತೆ ಮೂಲಕ ಎಲ್ಲಾ ವಿವಾದಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು. ನಾನು ನ್ಯಾಯಾಲಯವನ್ನು ಗೌರವಿಸುತ್ತೇನೆ. ಆದರೆ ನ್ಯಾಯಾಲಯ ಹೃದಯಗಳನ್ನು ಒಂದುಗೂಡಿಸುವುದಿಲ್ಲ ಎಂದರು.
ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದಂತೆ 100 ವರ್ಷ ಕಳೆದರೂ ಇನ್ನು ಅಂತಿಮ ತೀರ್ಪು ಬಂದಿಲ್ಲ. ಆದರೆ ನಾವು ನಮ್ಮ ಹೃದಯಗಳ ಮೂಲಕ ಈ ವಿವಾದವನ್ನು ಪರಿಹರಿಸಿಕೊಂಡರೆ, ಅದು ಮುಂದಿನ ಪೀಳಿಗೆಗೆ ಮಾದರಿಯಾಗುತ್ತದೆ ಎಂದು ರವಿಶಂಕರ್ ಅವರು ಹೇಳಿದ್ದಾರೆ.
ಶ್ರೀ ಶ್ರೀ ರವಿಶಂಕರ್ ಅವರು ಇಂದು ಲಖನೌನಲ್ಲಿ ಭಾರತೀಯ ಫರಂಗಿ ಮಹಲ್ ಇಸ್ಲಾಮಿಕ್ ಕೇಂದ್ರದ ಮೌಲಾನ್ ಖಾಲಿದ್ ಕಶೀದ್ ಫರಂಗಿ ಮಹಿಲ್ ಮತ್ತು ಇತರೆ ಮುಸ್ಲಿಂ ನಾಯಕರೊಂದಿಗೆ ಮಾತುಕತೆ ನಡೆಸಿದರು.

ಈಗಾಗಲೇ ಯೋಧ್ಯೆಯ ರಾಮಜನ್ಮಭೂಮಿಯ ಮುಖ್ಯ ಮಹಂತ ನೃತ್ಯ ಗೋಪಾಲ್‌ ದಾಸ್‌ರನ್ನು ರವಿಶಂಕರ್ ಅವರು ಭೇಟಿ ಮಾಡಿ, ಚರ್ಚಿಸಿದ್ದು, ಜನರು ಈ ಸಂಘರ್ಷದಿಂದ ಹೊರಬರಲು ಬಯಸಿದ್ದು, ಮಧ್ಯಸ್ಥಿಕೆಗೆ ಇದು ಸೂಕ್ತ ಸಮಯ ಎಂದು ಹೇಳಿದ್ದರು. 
SCROLL FOR NEXT