ನವದೆಹಲಿ: ಖಾಸಗಿ ಆಸ್ಪತ್ರೆಗಳ ಹಣದಾಸೆ ಮತ್ತೊಮ್ಮೊ ಜಗಜ್ಜಾಹೀರಾಗಿದ್ದು, ಮೆದುಳು ನಿಷ್ಕ್ರಿಯಗೊಂಡ ಬಾಲಕಿಯನ್ನು ಐಸಿಯುನಲ್ಲಿಟ್ಟು 16 ದಿನ ಚಿಕಿತ್ಸೆ ನೀಡಿ ಪೋಷಕರಿಗೆ 16 ಲಕ್ಷ ಬಿಲ್ ನೀಡಿದ ಆಸ್ಪತ್ರೆ ವಿರುದ್ಧ ಇದೀಗ ಪೋಷಕರು ತಿರುಗಿ ಬಿದ್ದಿದ್ದಾರೆ.
ಹರ್ಯಾಣದ ಗುರುಗಾಂವ್ ನಲ್ಲಿ ಈ ಘಟನೆ ನಡೆದಿದ್ದು, ಪೋಷಕರು ಹೇಳಿರುವಂತೆ ಆಸ್ಪತ್ರೆ ಸಿಬ್ಬಂದಿ ಮೆದುಳು ನಿಷ್ಕ್ರಿಯಗೊಂಡ ತಮ್ಮ ಮಗಳಿಗೆ 16 ದಿನ ಚಿಕಿತ್ಸೆ ನೀಡಿ ಬಳಿಕ 16 ರೂ.ಮೊತ್ತದ ಬಿಲ್ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಪೋಷಕರು ತಿಳಿಸಿರುವಂತೆ ಇದಕ್ಕೂ ಡೆಂಘೀಯಿಂದ ಬಳಲುತ್ತಿದ್ದ ತಮ್ಮ ಮಗಳನ್ನು ಗುರುಗಾಂವ್ ನ ಫೋರ್ಟಿಸ್ ಮೆಮೋರಿಯಲ್ ರಿಸರ್ಚ್ ಇನ್ಸ್ಟಿಟ್ಯೂಟ್ 15 ದಿನಗಳ ಹಿಂದೆ ದಾಖಲು ಮಾಡಲಾಗಿತ್ತು. ಮಗಳನ್ನು ಪರೀಕ್ಷಿಸಿದ ವೈದ್ಯರಿಗೆ ಆಕೆಯ ಮೆದುಳು ನಿಷ್ಕ್ರಿಯವಾಗಿದೆ ಎಂದು ತಿಳಿದಿತ್ತು. ಹೀಗಿದ್ದು, ಸತತ 15 ದಿನಗಳ ಕಾಲ ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಿದರು. ಇದಾಗ್ಯೂ ಈ ವೇಳೆ ಒಂದು ಬಾರಿಯೂ ಆಕೆಯ ಮೆದುಳು ಪರೀಕ್ಷೆ ಮಾಡಿರಲಿಲ್ಲ. ಕೊನೆಗೆ ನಮ್ಮ ಒತ್ತಾಯದ ಮೇರೆಗೆ ಬಾಲಕಿಯ ಮೆದುಳಿನ ಎಂಆರ್ ಐ ಸ್ಕ್ಯಾನ್ ಮಾಡಿಸಲಾಗಿತ್ತು.
ಬಳಿಕ ನಮ್ಮ ಬಳಿ ಬಂದ ವೈದ್ಯರು ಬಾಲಕಿಯ ಮೆದುಳು ಶೇ.70 ರಿಂದ 80ರಷ್ಟು ನಿಷ್ಕ್ರಿಯವಾಗಿದೆ ಎಂದು ಹೇಳಿದರು. ಆಗ ಬಾಲಕಿ ಆದ್ಯಾಳ ತಂದೆಗೆ ಆಸ್ಪತ್ರೆ ಸಿಬ್ಬಂದಿ 16 ಲಕ್ಷ ಬಿಲ್ ನೀಡಿದ್ದರು. ಆದ್ಯಾಳ ತಂದೆ ಜಯಂತ್ ಸಿಂಗ್ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದು ಮಗಳ ಚಿಕಿತ್ಸೆಯ ಹಣವನ್ನು ಭರಿಸಲು ಉಳಿತಾಯದ ಹಣದ ಜತೆ ಸ್ನೇಹಿತರು ಹಾಗೂ ಬಂಧುಗಳ ಬಳಿ ಸಾಲ ತಗೊಂಡಿದ್ದು ಸಾಲದೆ 5 ಲಕ್ಷ ರೂಪಾಯಿ ಖಾಸಗಿ ಹಣಕಾಸು ಸಂಸ್ಥೆಯಿಂದ ಸಾಲ ಮಾಡಿ ಆಸ್ಪತ್ರೆಯ ಬಿಲ್ ತುಂಬ ಬೇಕಾಗಿ ಬಂತು.
ಬಳಿಕ ಆಸ್ಪತ್ರೆಯ ದುಬಾರಿ ತನಕ್ಕೆ ಬೇಸತ್ತ ಪೋಷಕರು ಬಾಲಕಿಯನ್ನು ಸಮೀಪದ ರಾಕ್ ಲ್ಯಾಂಡ್ ಆಸ್ಪತ್ರೆಗೆ ದಾಖಲಿಸಲು ಕರೆದುಕೊಂಡು ಹೋಗುತ್ತಿದ್ದಾಗ ಬಾಲಕಿ ಆದ್ಯ ಮೃತಪಟ್ಟಿದ್ದಾಳೆ. ಇದೀಗ ಬಾಲಕಿ ಸಾವಿನಿಂದ ಆಕ್ರೋಶಗೊಂಡಿರುವ ಬಾಲಕಿ ತಂದೆ ಜಯಂತ್ ಸಿಂಗ್ ಫೋರ್ಟಿಸ್ ಆಸ್ಪತ್ರೆ ವಿರುದ್ಧ ಕಾನೂನು ಸಮರ ಹೂಡಲು ನಿರ್ಧರಿಸಿದ್ದಾರೆ. ಅದರಂತೆ ಈಗಾಗಲೇ ಆಸ್ಪತ್ರೆ ವಿರುದ್ಧ ಆನ್ ಲೈನ್ ಅಭಿಯಾನ ಆರಂಭಿಸಿರುವ ಜಯಂತ್ ಸಿಂಗ್ #FortisLoot ಎಂಬ ಹ್ಯಾಶ್ಟ್ಯಾಗ್ನೊಂದಿಗೆ ಟ್ವೀಟ್ ಮೂಲಕ ಆಸ್ಪತ್ರೆ ವಿರುದ್ಧ ಸರಣಿ ಟ್ವೀಟ್ ಗಳನ್ನು ಮಾಡುತ್ತಿದ್ದಾರೆ. 'ಸರಕಾರ ಇಂಥ ಆಸ್ಪತ್ರೆ ವಿರುದ್ಧ ಕ್ರಮಕೈಗೊಳ್ಳಬೇಕಾಗಿದೆ, ಯಾವುದೇ ಆಸ್ಪತ್ರೆ ರೋಗಿ ಜತೆ ಈ ರೀತಿ ವರ್ತಿಸಬಾರದು' ಎಂದು ಟ್ವೀಟ್ ಮಾಡಿದ್ದಾರೆ.
ಅಲ್ಲದೆ ಜಯಂತ್ ಸಿಂಗ್ ಅವರ ಈ ಟ್ವೀಟ್ ವ್ಯಾಪಕ ವೈರಲ್ ಆಗುತ್ತಿದ್ದು, ಹರ್ಯಾಣದ ಆರೋಗ್ಯ ಸಚಿವರ ಗಮನ ಕೂಡ ಸೆಳೆದಿದೆ. 'ಇದರ ಕುರಿತು ಮಾಹಿತಿ ನೀಡಿ, ನಾವು ಅಗತ್ಯ ಕ್ರಮ ಕೈಗೊಳ್ಳುತ್ತೇವೆ' ಎಂದು ನಾಡಾ ಟ್ವೀಟ್ ಮಾಡಿದೆ. ಮಾಡುತ್ತಿರುವ ನಟ್ಟಿಗರು 'ರೋಗಿಗಳಿಗೆ ಚಿಕಿತ್ಸೆ ನೆಪದಲ್ಲಿ ದಂಧೆ ಮಾಡುತ್ತಿರುವ ಆಸ್ಪತ್ರೆ ವಿರುದ್ಧ ಕ್ರಮಕೈಗೊಳ್ಳಬೇಕು' ಎಂದು ಆಗ್ರಹಿಸುತ್ತಿದ್ದಾರೆ.
ನಾವೇನೂ ತಪ್ಪು ಮಾಡಿಲ್ಲ: ಆಸ್ಪತ್ರೆ ಸ್ಪಷ್ಟನೆ
ಇನ್ನು ಈ ವಿಚಾರ ವಿವಾದದ ಸ್ವರೂಪ ಪಡೆಯುತ್ತಿದ್ದಂತೆಯೇ ಗುರಗಾಂವ್ ಫೋರ್ಟಿಸ್ ಆಸ್ಪತ್ರೆ ಸ್ಪಷ್ಟನೆ ನೀಡಿದ್ದು, "ಬೇರೊಂದು ಖಾಸಗಿ ಆಸ್ಪತ್ರೆಯಿಂದ ನಮ್ಮ ಆಸ್ಪತ್ರೆಗೆ ಕರೆತರುವಾಗ ಮಗುವಿನ ಸ್ಥತಿ ಚಿಂತಾಜನಕವಾಗಿತ್ತು, ನಾವು ಮಾಡಿದ ಎಲ್ಲಾ ಪರೀಕ್ಷೆ ಬಗ್ಗೆ ಪೋಷಕರಿಗೆ ಮಾಹಿತಿ ನೀಡಿದ್ದೆವು. ಮಗುವನ್ನು 15 ದಿನಗಳ ಕಾಲ ತೀವ್ರ ನಿಗಾ ಘಟಕದಲ್ಲಿ ಇಟ್ಟಿದ್ದೆವು. ಹಾಗಾಗಿ ಎಷ್ಟು ಬಿಲ್ ಆಗಿದೆ. ಮಗುವಿನ ಪೋಷಕರು ನಮ್ಮ ಸಲಹೆಯನ್ನು ಮೀರಿ ಬೇರೆ ಆಸ್ಪತ್ರೆಗೆ ಕೊಂಡೊಯ್ಯುವಾಗ ಮಗು ಮೃತ ಪಟ್ಟಿದೆ' ಎಂದು ಆಸ್ಪತ್ರೆಯ ಆಡಳಿತ ಮಂಡಳಿ ಹೇಳಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos