ಗ್ವಾಲಿಯರ್: ಬಿಡುಗಡೆಗೆ ಮುನ್ನವೇ ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದ ಪದ್ಮಾವತಿ ಚಿತ್ರಕ್ಕೆ ನಿಷೇಧ ಹೇರಿದ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಆರ್ ಟಿಐ ಕಾರ್ಯಕರ್ತರೊಬ್ಬರು ಶನಿವಾರ ಲೀಗಲ್ ನೋಟಿಸ್ ಜಾರಿ ಮಾಡಿದ್ದಾರೆ.
ವಿವಾದ ಮತ್ತು ಮಾಧ್ಯಮಗಳ ವರದಿಯನ್ನು ಆಧರಿಸಿ ಮಧ್ಯಪ್ರದೇಶ ಸರ್ಕಾರ ಚಿತ್ರ ಬಿಡುಗಡೆಗೆ ಮುನ್ನವೇ ನಿಷೇಧ ಹೇರಿರುವುದರ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ ಆರ್ ಟಿಐ ಕಾರ್ಯಕರ್ತ ಗ್ವಾಲಿಯರ್ ನಿವಾಸಿ ಹರಿ ಕೃಷ್ಣ ಬಸ್ನೇರಿಯಾ ಅವರು ತಮ್ಮ ವಕೀಲ ಪುರುಷೋತ್ತಮ ರೈ ಅವರ ಮೂಲಕ ಮಧ್ಯ ಪ್ರದೇಶ ಮುಖ್ಯಮಂತ್ರಿ ಲೀಗಲ್ ನೋಟಿಸ್ ನೀಡಿದ್ದಾರೆ.
'ಪದ್ಮಾವತಿ' ಚಿತ್ರದಲ್ಲಿ ರಾಣಿ ಪದ್ಮಾವತಿ ಅವರ ಘನತೆಗೆ ಧಕ್ಕೆ ಬರುವಂತಹಾ ಅಂಶಗಳು ಇವೆ ಹಾಗಾಗಿ ಆ ಚಿತ್ರವನ್ನು ಮಧ್ಯಪ್ರದೇಶದ ಪುಣ್ಯ ಭೂಮಿಯಲ್ಲಿ ಬಿಡುಗಡೆ ಆಗುವುದಕ್ಕೆ ಅನುಮತಿ ನೀಡುವುದಿಲ್ಲ ಎಂದು ಶಿವರಾಜ್ ಸಿಂಗ್ ಚೌಹಾಣ್ ಅವರು ನವೆಂಬರ್ 20ರಂದು ಬಹಿರಂಗವಾಗಿ ಹೇಳಿದ್ದರು. ಈ ಮೂಲಕ ಪದ್ಮಾವತಿ ಚಿತ್ರ ಬಿಡುಗಡೆಗೆ ಮೊದಲ ಸರ್ಕಾರಿ ನಿಷೇಧ ಹೇರಿಕೆಯಾಗಿತ್ತು.