ನವದೆಹಲಿ: ನವ ಭಾರತದ ಉದಯಕ್ಕಾಗಿ ದೇಶದಲ್ಲಿ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಮಧ್ಯೆ ಒಗ್ಗಟ್ಟು ಇರಬೇಕು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಅವರು ನಿನ್ನೆ ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಸಂವಿಧಾನ ದಿನದ ಕಾರ್ಯಕ್ರಮದಲ್ಲಿ, ನ್ಯಾಯಾಂಗ ಮತ್ತು ಕಾರ್ಯಾಂಗ ಒಟ್ಟಿಗೆ ಕೆಲಸ ಮಾಡಿದರೆ ಏನಾಗುತ್ತದೆ ಎಂದು ಆತ್ಮಾವಲೋಕನ ಮಾಡಿಕೊಳ್ಳುವ ಸಮಯವಿದು ಎಂದು ಹೇಳಿದರು.
ಇತ್ತೀಚೆಗೆ ಪ್ರಧಾನಿಯವರ ಸಂಪುಟದ ಸಚಿವರು ಶಾಸಕಾಂಗ ಮತ್ತು ಕಾರ್ಯಾಂಗದ ವಿಷಯದಲ್ಲಿ ನ್ಯಾಯಾಂಗ ಮಧ್ಯೆ ಪ್ರವೇಶಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದರು. ಇದಕ್ಕೆ ಸರಿಯಾಗಿ ಈ ಹಿಂದೆ ಹಣಕಾಸು ಸಚಿವ ಅರುಣ್ ಜೇಟ್ಲಿಯವರು ನ್ಯಾಯಾಂಗ, ಶಾಸಕಾಂಗ ಮತ್ತು ಕಾರ್ಯಾಂಗದ ಕಾರ್ಯವೈಖರಿಯನ್ನು ಆಕ್ರಮಿಸುತ್ತಿದೆ ಎಂದು ಆರೋಪವನ್ನು ಮಾಡಿದ್ದರು.
ಮೂರೂ ಅಂಗಗಳ ಮಧ್ಯೆ ಅಧಿಕಾರದ ಪ್ರತ್ಯೇಕತೆ ಸಂವಿಧಾನದ ಮುಖ್ಯ ಅಂಶವಾಗುತ್ತದೆ.ಶಾಸಕಾಂಗವು ಶಾಸನಸಭೆಗೆ ಮುಕ್ತವಾಗಿರಬೇಕು,ಕಾರ್ಯಾಂಗಕ್ಕೆ ಕಾರ್ಯ ಮಾಡಲು ಮುಕ್ತವಾಗಿ ಬಿಡಬೇಕು ಮತ್ತು ನ್ಯಾಯಾಂಗಕ್ಕೆ ಕಾನೂನನ್ನು ವ್ಯಾಖ್ಯಾನೆಗೆ ಬಿಡಬೇಕು ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಅಧಿಕಾರಗಳನ್ನು ಪ್ರತ್ಯೇಕಿಸುವ ಭಾತೃತ್ವಕ್ಕೆ ಧಕ್ಕೆ ತರದಿರುವುದು ಮುಖ್ಯವಾಗುತ್ತದೆ. ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗಗಳ ಮಧ್ಯೆ ಸೂಕ್ಷ್ಮ ಸಮತೋಲನ ಕಾಪಾಡಿಕೊಳ್ಳುವುದು ಮತ್ತು ಮೂರೂ ಅಂಗಗಳನ್ನು ಸಮಾನವಾಗಿ ಪರಿಗಣಿಸುವುದು ಮುಖ್ಯವಾಗುತ್ತದೆ ಎಂದು ಹೇಳಿದರು.