ಲಖನೌ/ರಾಂಚಿ: ಉತ್ತರಪ್ರದೇಶ, ಬಿಹಾರ ಹಾಗೂ ಉತ್ತರಾಖಂಡ ರಾಜ್ಯಗಳಲ್ಲಿ ಹಿಂದೂ ಮತ್ತು ಮುಸ್ಲಿಮರ ನಡುವೆ ಕೋಮು ಘರ್ಷಣೆ ನಡೆದಿದ್ದು, 12ಕ್ಕೂ ಹೆಚ್ಚು ಜನರಿಗೆ ಗಾಯವಾಗಿರುವ ಘಟನೆ ಭಾನುವಾರ ನಡೆದಿದೆ.
ಉತ್ತರಪ್ರದೇಶದ ಮೂರು ಪ್ರದೇಶಗಳಲ್ಲಿ ಹಿಂದೂ ಮತ್ತು ಮುಸ್ಲಿಮರ ನಡುವೆ ಘರ್ಷಣೆ ನಡೆದಿದ್ದು, 12 ಮಂದಿ ಗಾಯಗೊಂಡು, 2 ಕಾರು, 4 ಬೈಕ್ ಸೇರಿ ಒಟ್ಟು 6 ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ವರದಿಗಳು ತಿಳಿಸಿವೆ.
ಕಾನ್ಪುರ ಜಿಲ್ಲೆಯ ಪರಮ್ ಪುರ್ವ ಪ್ರದೇಶಗಲ್ಲಿ ಮೊದಲಿಗೆ ಘರ್ಷಣೆ ನಡೆದಿದೆ. ಹಿಂದೂಗಳಿರುವ ಪ್ರದೇಶದಲ್ಲಿ ನಿನ್ನೆ ದಸರಾ ಹಬ್ಬವನ್ನು ಆಚರಣೆ ಮಾಡಲಾಗುತ್ತಿತ್ತು. ಇದೇ ಪ್ರದೇಶದಲ್ಲಿ ಮೊಹರಂ ಮೆರವಣಿಗೆ ನಡೆಸಲಾಗುತ್ತಿತ್ತು. ಈ ವೇಳೆ ಕೆಲವರು ಸ್ಥಳದಲ್ಲಿ ಕಲ್ಲು ತೂರಾಟ ನಡೆಸಿದ್ದಾರೆ. ಸ್ಥಳದಲ್ಲಿ ದಸರಾ ಆಚರಣೆ ಇದ್ದ ಹಿನ್ನಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿತ್ತು. ಘರ್ಷಣೆ ಉಂಟಾದ ಹಿನ್ನಲೆಯಲ್ಲಿ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ.
ಇದಲ್ಲದೆ, ಕಾನ್ಪುರ ಜಿಲ್ಲೆಯ ರಾವತ್ಪುರ ಗ್ರಾಮದಲ್ಲಿಯೂ ಘರ್ಷಣೆ ಏರ್ಪಟ್ಟಿತ್ತು. ಬಳಿಕ ಪೊಲೀಸರು ಮಧ್ಯೆಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.
ಬಿಹಾರ ರಾಜ್ಯದ ಜಮುಯ್ ಪ್ರದೇಶದಲ್ಲಿರೂ ದುರ್ಗಾ ಮೂರ್ತಿ ವಿಸರ್ಜನೆ ವೇಳೆ ಕಲ್ಲು ತೂರಾಟ ನಡೆದು ಘರ್ಷಣೆ ಏರ್ಪಟ್ಟಿದೆ. ಈ ವೇಳೆ 6 ಮಂದಿ ಗಾಯಗೊಂಡಿದ್ದಾರೆ.
ಜಾರ್ಖಾಂಡ್, ಜಮ್ಶೆಡ್ಪುರ, ರಾಂಚಿ, ಡಾಲ್ಟೊಂಗಂಜ್ ನಲ್ಲೂ ದುರ್ಗಾ ಮೂರ್ತಿ ವಿಸರ್ಜನೆ ವೇಳೆ ಹಿಂದೂ ಮತ್ತು ಮುಸ್ಲಿಮರ ನಡುವೆ ಘರ್ಷಣೆ ಏರ್ಪಟ್ಟಿದೆ ಎಂದು ವರದಿಗಳು ತಿಳಿಸಿವೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos