ಖಾನ್ಪುರ: ಖಾನ್ಪುರದಲ್ಲಿ ಸ್ಫೋಟ ಸಂಭವಿಸಿದ್ದು ಇಬ್ಬರು ಸಾವನ್ನಪ್ಪಿದ್ದು, ಹಲವು ಮನೆಗಳಿಗೆ ಹಾನಿ ಉಂಟಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಮಹಾರಾಜ್ ಪುರ ಪ್ರದೇಶದ ರಘುನಾಥ್ ಸಿಂಗ್ ಎಂಬುವವರ ಮನೆಯ ಬಳಿ ಘಟನೆ ನಡೆದಿದ್ದು, ಇಬ್ಬರ ಮೃತದೇಹಗಳನ್ನೂ ಸಹ ಹೊರತೆಗೆಯಲಾಗಿದೆ. ಈ ಘಟನೆಯಲ್ಲಿ ರಘುನಾಥ್ ಸಿಂಗ್ ಅವರ ಪುತ್ರ ಸಹ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಘಟನೆ ನಡೆದ ಪ್ರದೇಶದಲ್ಲಿ 7 ಮನೆಗಳು ಹಾನಿಗೊಳಗಾಗಿದ್ದು, ಘಟನಾ ಸ್ಥಳ ಕಿರಿದಾಗಿರುವುದರಿಂದ ಆಂಬುಲೆನ್ಸ್ ಹಾಗೂ ಇನ್ನಿತರ ರಕ್ಷಣಾ ಸಿಬ್ಬಂದಿಗಳು ತ್ವರಿತ ಕಾರ್ಯಾಚರಣೆ ನಡೆಸಲು ಕಷ್ಟವಾಗುತ್ತಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಸ್ಫೋಟಕ್ಕೆ ಕಾರಣ ಇನ್ನಷ್ಟೇ ತಿಳಿಯಬೇಕಿದೆ. ಈ ಪ್ರದೇಶದಲ್ಲಿ ಅಕ್ರಮ ಪಟಾಕಿ ಉತ್ಪಾದನಾ ಘಟಕಗಳಿದ್ದು, ಇದರಿಂದಲೂ ಸ್ಫೋಟ ಸಂಭವಿಸಿರಬಹುದು ಎಂದು ಹೇಳಲಾಗುತ್ತಿದೆ.