ನವದೆಹಲಿ: ಭಾರತ ಮತ್ತು ಬಾಂಗ್ಲಾದೇಶದ ಗಡಿಯಲ್ಲಿ ರೊಹಿಂಗ್ಯಾರ 140ಕ್ಕೂ ಹೆಚ್ಚು ಪ್ರದೇಶಗಳನ್ನು ಭದ್ರತಾ ಪಡೆಗಳು ಪತ್ತೆ ಹೆಚ್ಚಿದ್ದು, ಈ ಹಿನ್ನಲೆಯಲ್ಲಿ ಅಕ್ರಮ ನುಸುಳವಿಕೆಯನ್ನು ತಡೆಯಲು ಗಡಿ ಭಾಗಗಳಲ್ಲಿ ಹೆಚ್ಚಿನ ಸೈನಿಕರನ್ನು ರವಾನೆ ಮಾಡಲಾಗಿದೆ ಎಂದು ಅಧಿಕಾರಿಗಳು ಶನಿವಾರ ಹೇಳಿದ್ದಾರೆ.
ಅಕ್ಟೋಬರ್ 2 ರಿಂದ ಗಡಿ ಭದ್ರತಾ ಪಡೆ ಹಾಗೂ ಬಾಂಗ್ಲಾದೇಶ ಸೈನಿಕರ ನಡುವೆ ನಾಲ್ಕು ದಿನಗಳ ವಾರ್ಷಿಕ ಸಭೆ ನಡೆದಿದೆ.
ಭಾರತ ಮತ್ತು ಬಾಂಗ್ಲಾದೇಶದ ಸೇನಾಧಿಕಾರಿಗಳು ಮಾತುಕತೆ ನಡೆಸಿದ್ದು, ಮಾತುಕತೆ ಕುರಿತಂತೆ ಬಿಎಸ್ಎಫ್ ಡಿಜಿ ಕೆ.ಕೆ. ಶರ್ಮಾ ಮತ್ತು ಬಿಜಿಬಿ (ಬಾಂಗ್ಲಾ ಗಡಿ ಭದ್ರತಾ ಮುಖ್ಯಸ್ಥ) ಮುಖ್ಯಸ್ಥ. ಮೇ.ಜ. ಅಬುಲ್ ಹುಸೇನ್ ಅವರು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.
ಸಭೆ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಭಾರತ ಗಡಿ ಭದ್ರತಾ ಪಡೆಯ ಮುಖ್ಯಸ್ಥ, ಭಾರತ ಮತ್ತು ಬಾಂಗ್ಲಾದೇಶದ ಗಡಿಯಲ್ಲಿ 140ಕ್ಕೂ ಹೆಚ್ಚು ರೊಹಿಂಗ್ಯಾರ ಪ್ರದೇಶಗಳನ್ನು ಪತ್ತೆ ಹಚ್ಚಲಾಗಿದೆ. ಈ ಹಿನ್ನಲೆಯಲ್ಲಿ ಅಕ್ರಮ ನುಸುಳುವಿಕೆಯನ್ನು ತಡೆಯುವ ಸಲುವಾಗಿ ಗಡಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಯಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಬಾಂಗ್ಲಾ ಗಡಿ ಭದ್ರತಾ ಡಿಜಿ, ಬಾಂಗ್ಲಾದೇಶ ಸರ್ಕಾರ ನೀತಿಗಳು ಸ್ಪಷ್ಟವಾಗಿದ್ದು, ನಮ್ಮ ಭೂಮಿಯಲ್ಲಿ ಭಯೋತ್ಪಾದನಾ ಚಟುವಟಿಕೆಗಳಿಗೆ ಯಾವುದೇ ರೀತಿಯ ಜಾಗವಿಲ್ಲ ಎಂಬ ಭರವಸೆಯನ್ನು ನೀಡುತ್ತಿದ್ದೇವೆ. ನೆರೆರಾಷ್ಟ್ರ ಭಾರತದಲ್ಲಿಯೂ ಭಯೋತ್ಪಾದನಾ ಚಟುವಟಿಕೆಗಳು ನಡೆಯಲು ಬಿಡುವುದಿಲ್ಲ. ಮ್ಯಾನ್ಮಾರ್ ಗಡಿಯೊಂದಿಗೆ ಬೇಲಿ ಹಾಕಲು ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.
ಬಳಿಕ ಮಾತನಾಡಿರುವ ಕೆಕೆ. ಶರ್ಮಾ ಅವರು, ಮಾತುಕತೆ ವೇಳೆ ರೊಹಿಂಗ್ಯಾ ಸಮಸ್ಯೆ ಕುರಿತಂತೆ ಚರ್ಚೆ ನಡೆಸಲಾಯಿತು. ಸಾಕಷ್ಟು ಸಂಖ್ಯೆಯ ರೊಹಿಂಗ್ಯಾ ಜನತೆ ಬಾಂಗ್ಲಾದೇಶಕ್ಕೆ ಕಾಲಿಟ್ಟಿದ್ದಾರೆ. ಇದು ನಿಜಕ್ಕೂ ಗಂಭೀರವಾದಂತಹ ವಿಚಾರವಾಗಿದೆ. ರೊಹಿಂಗ್ಯಾ ಜನತೆ ಭಾರತದ ಗಡಿ ದಾಟಿ ಅಕ್ರಮವಾಗಿ ಪ್ರವೇಶ ಮಾಡುತ್ತಿದ್ದಾರೆ. ಹೀಗಾಗಿ ಅಕ್ರಮ ನುಸುಳುವಿಕೆಯ ವಿರುದ್ಧ ಉಭಯ ರಾಷ್ಟ್ರಗಳು ಕೆಲ ನಿರ್ಧಾರಗಳನ್ನು ಕೈಗೊಂಡಿದೆ ಎಂದು ತಿಳಿಸಿದ್ದಾರೆ.