ಕೇರಳ ಮಂತ್ರ ಪಠಿಸಿ ಅಧಿಕಾರ ವಹಿಸಿಕೊಂಡ ಮೊದಲ ದಲಿತ ಅರ್ಚಕ
ತಿರುವನಂತಪುರಂ: ಮಣಪ್ಪುರಂ ನಲ್ಲಿರುವ ಶಿವ ದೇವಾಲಯದ ಮೊದಲ ದಲಿತ ಅರ್ಚಕನಾಗಿ ಅಧಿಕಾರ ವಹಿಸಿಕೊಳ್ಳುವ ಮೂಲಕ ಯದು ಕೃಷ್ಣನ್ ಹೊಸ ಇತಿಹಾಸ ನಿರ್ಮಿಸಿದ್ದಾರೆ.
ತಿರುವಂಕೂರು ದೇವಸ್ವಂ ಮಂಡಳಿ ಇತ್ತೀಚೆಗಷ್ಟೇ 36 ಬ್ರಾಹ್ಮಣೇತರರನ್ನು ಅರ್ಚಕ ವೃತ್ತಿಗೆ ಶಿಫಾರಸ್ಸು ಮಾಡುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿತ್ತು. ಪಿಕೆ ರವಿ ಹಾಗೂ ಲೀಲಾ ಎಂಬುವವರ ಪುತ್ರರಾಗಿರುವ ಕೃಷ್ಣನ್ (22) ತಂತ್ರ ಶಾಸ್ತ್ರದಲ್ಲಿ 10 ವರ್ಷ ತರಬೇತಿ ಪಡೆದಿದ್ದು, ಮಂತ್ರಗಳನ್ನು ಪಠಿಸುವ ಮೂಲಕ ಶಿವ ದೇವಾಲಯದ ಅರ್ಚಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ತನಗೆ ತಂತ್ರ ಶಾಸ್ತ್ರವನ್ನು ಬೋಧಿಸಿದ್ದ ಗುರು ಕೆಕೆ ಅನಿರುದ್ಧನ್ ತಂತ್ರಿ ಅವರ ಆಶೀರ್ವಾದ ಪಡೆದು, ದೇವಾಲಯದ ಪ್ರಧಾನ ಅರ್ಚಕರಾದ ಗೋಪಕುಮಾರ್ ನಂಬೂದರಿ ಅವರೊಂದಿಗೆ ದೇವಾಲಯವನ್ನು ಪ್ರವೇಶಿಸಿರುವ ಕೃಷ್ಣನ್ ಅರ್ಚಕರಾಗಿ ಸೇರ್ಪಡೆಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತ್ರಿಶೂರ್ ಜಿಲ್ಲೆಯವರಾಗಿರುವ ಕೃಷ್ಣನ್ ಸಂಸ್ಕೃತ ವಿಷಯದಲ್ಲಿ ಅಂತಿಮ ವರ್ಷದ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿದ್ದಾರೆ. ತಮ್ಮ ಮನೆಯ ಬಳಿಯೇ ಇದ್ದ ದೇವಾಲಯದಲ್ಲಿ 15 ನೇ ವರ್ಷಕ್ಕೆ ಪೂಜೆ ಮಾಡುವುದನ್ನು ಕೃಷ್ಣನ್ ಪ್ರಾರಂಭಿಸಿದ್ದರು. ದೇವಾಲಯಕ್ಕೆ ಕೆಳವರ್ಗಗಳ ಜನರಿಗೆ ಪ್ರವೇಶಕ್ಕಾಗಿ 1936 ರಲ್ಲಿ ನಡೆದಿದ್ದ ಘೋಷಣೆಯ 81 ನೇ ವರ್ಷಾಚರಣೆಯ ಸಂದರ್ಭದಲ್ಲಿಯೇ ದಲಿತರೊಬ್ಬರು ಮುಖ್ಯ ಅರ್ಚಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.