ದೇಶ

ಸೋಲಾರ್ ಹಗರಣ: ಕೇರಳ ಕಾಂಗ್ರೆಸ್'ಗೆ ಭಾರೀ ಹಿನ್ನಡೆ, ಒಮನ್ ಚಾಂಡಿ ವಿರುದ್ಧ ತನಿಖೆಗೆ ಆದೇಶ

Manjula VN

ತಿರುವನಂತಪುರ: ಸೋಲಾರ್ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್'ಗೆ ಭಾರೀ ಹಿನ್ನಡೆಯುಂಟಾಗಿದ್ದು, ಲಂಚ ಪಡೆದುಕೊಂಡ ಆರೋಪಕ್ಕೆ ಸಂಬಂಧಿಸಿದಂತೆ ಕೇರಳ ಮಾಜಿ ಮುಖ್ಯಮಂತ್ರಿ ಒಮನ್ ಚಾಂಡಿ ವಿರುದ್ಧ ರಾಜ್ಯ ಸರ್ಕಾರ ವಿಜಿಲೆನ್ಸ್ ತನಿಖೆಗೆ ಬುಧವಾರ ಆದೇಶಿಸಿದೆ. 

ಸೋಲಾರ್ ಹಗರಣಕ್ಕೆ ಸಂಬಂಧಿಸಿದಂತೆ ಕಳೆದ ತಿಂಗಳು ನಿವೃತ್ತ ನ್ಯಾಯಮೂರ್ತಿ ಜಿ. ಶಿವರಾಜನ್ ನೇತೃತ್ವ ಆಯೋಗ ಸರ್ಕಾರಕ್ಕೆ ವರದಿಯೊಂದನ್ನು ಸಲ್ಲಿಸಿತ್ತು. ವರದಿಯಲ್ಲಿ ಮತ್ತಷ್ಟು ತನಿಖೆಗೆ ನಡೆಸುವ ಅಗತ್ಯ ಕುರಿತಂತೆ ಸಲಹೆ ನೀಡಿತ್ತು. ಈ ವರದಿಯನ್ನು ಆಧರಿಸಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ತನಿಖೆಗೆ ಆದೇಶ ನೀಡಿದ್ದಾರೆ. 

2013ರಲ್ಲಿ ಬೆಳಕಿಗೆ ಬಂದಿದ್ದ ಸೋಲಾರ್ ಹಗರಣದಲ್ಲಿ ಭಾಗಿಯಾಗಿರುವ ಕುರಿತು ಒಮನ್ ಚಾಂಡಿ ಅವರ ಸಂಪುಟದಲ್ಲಿದ್ದ ತಿರುವಂಕೂರ್ ರಾಧಾಕೃಷ್ಣನ್, ಆರ್ಯಾದನ್ ಮೊಹಮ್ಮೆದ್, ಥಂಪನೂರ್ ರವಿ ಹಾಗೂ ಬೆನ್ನಿ ಬೆಹನನ್ ಸೇರಿ ಹಲವರು ತನಿಖೆ ಎದುರಿಸಬೇಕಾಗಿದೆ. 
2013ರಲ್ಲಿ ಆರೋಪಿಗಳು ಚಿತ್ತೂರಿನಲ್ಲಿ ಟೀಮ್ ಸೋಲಾರ್ ರಿನಿವೆಬಲ್ ಎನರ್ಜಿ ಸಲ್ಯೂಷನ್ ಎಂಬ ನಕಲಿ ಕಂಪನಿಯನ್ನು ಅಸ್ತಿತ್ವಕ್ಕೆ ತಂದಿದ್ದರು. ಮುಖ್ಯಮಂತ್ರಿಗಳ ಕಚೇರಿ ಅಧಿಕಾರಿಗಳು ಸಹಿತ ಹಲವು ಪ್ರಭಾವಿ ರಾಜಕಾರಣಿಗಳ ಸಂಪರ್ಕವನ್ನು ದುರುಪಯೋಗಪಡಿಸಿಕೊಂಡು ನೂರಾರು ಜನರಿಗೆ ವಂಚನೆ ಮಾಡಿದ್ದರು. 

ಕಂಪನಿಗೆ ಪಾಲುದಾರರನ್ನಾಗಿ ಮಾಡಿಕೊಳ್ಳುವ ಆಮಿಷವೊಡ್ಡಿ ಹಲವರಿಂದ ಕೋಟ್ಯಾಂತರ ಹಣವನ್ನು ಸಂಗ್ರಹಿಸಿದ್ದರು. ಸರ್ಕಾರದ ಯೋಜನೆ ಗುತ್ತಿಗೆ ಪಡೆಯವಲ್ಲಿಯೂ ಯಶಸ್ವಿಯಾಗಿದ್ದರು. ಸೋಲಾರ್ ಅಳವಡಿಕೆಗಾಗಿ ನೂರಾರು ಜನರಿಂದ ಮುಂಗಡ ಹಣ ಪಡೆದು ವಂಚಿಸಿದ್ದರು. ಸಜ್ಜದ್ ಎಂಬುವವರು ನೀಡಿದ ದೂರಿನ ಹಿನ್ನಲೆಯಲ್ಲಿ ತನಿಖೆ ಆರಂಭವಾಗಿ ದೊಡ್ಡ ಹಗರಣ ಬೆಳಕಿಗೆ ಬಂದಿತ್ತು. ಅಂದಿನ ಮುಖ್ಯಮಂತ್ರಿ ಒಮನ್ ಚಾಂಡಿಯವರಿಗೂ ಭ್ರಷ್ಟಾಚಾರದ ಕಳಂಕ ತಟ್ಟಿತ್ತು. 
SCROLL FOR NEXT